ಮಡಿಕೇರಿ: ಕೊಡಗು ದಕ್ಷಿಣಕನ್ನಡ ಜಿಲ್ಲೆಯ ಗಡಿಭಾಗ ಹಾಗೂ ಸುಳ್ಯ ತಾಲೂಕಿನ ಕೂಜಿಮಲೆಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆ ನಕ್ಸಲ್ ಅಲ್ಲ ಎಂದು ಕೊಡಗು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಈ ವ್ಯಾಪ್ತಿಯಲ್ಲಿ ನಕ್ಸಲ್ ಚಲನವಲನ ಕಂಡು ಬಂದ ಹಿನ್ನಲೆಯಲ್ಲಿ ಅಪರಿಚಿತರನ್ನು ಸಂಶಯದಿಂದಲೇ ನೋಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದರಂತೆ ಕೂಜಿಮಲೆಯಲ್ಲಿ ಮಹಿಳೆಯೊಬ್ಬರು ಪತ್ತೆಯಾಗಿದ್ದು, ಈಕೆ ನಕ್ಸಲ್ ಗೆ ಸೇರಿದವಳು ಎಂಬ ವದಂತಿ ಹರಡಿತ್ತು. ಹೀಗಾಗಿ ವಿಷಯ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ನಕ್ಸಲ್ ಅಲ್ಲ ರಾಜಸ್ತಾನದ ಮೂಲದವಳೆಂಬುದು ತಿಳಿದು ಬಂದಿದೆ. ಸದ್ಯ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಆಶ್ರಮಕ್ಕೆ ಸೇರ್ಪಡೆಗೊಳಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಕೂಜಿಮಲೆ ಎಸ್ಟೇಟ್ ನಲ್ಲಿ ಕಾಣಿಸಿಕೊಂಡ ಈ ಮಹಿಳೆ ನಕ್ಸಲ್ ಎಂಬ ವದಂತಿಯನ್ನು ಹರಡಲಾಗಿತ್ತು. ಹೀಗಾಗಿ ಎ ಎನ್ ಎಫ್ ತಂಡ ಮತ್ತು ಕೊಡಗು ಜಿಲ್ಲಾ ಶಸ್ತ್ರಸ್ಥ ಪಡೆಯ ಸಿಬ್ಬಂದಿ ಎಸ್ಟೇಟ್ ಗೆ ಭೇಟಿ ನೀಡಿ ಪರಿಶೀಲಿಸಿ ಆಕೆಯನ್ನು ಪತ್ತೆ ಹಚ್ಚಿ ಮಡಿಕೇರಿಗೆ ಕರೆತಂದಿದ್ದರು. ಮಧ್ಯ ರಾತ್ರಿ 2 ಗಂಟೆ ತನಕ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಮ್ ರಾಜನ್ ಭಾಗವಹಿಸಿ ಆಕೆಯ ಸಂಪೂರ್ಣ ವಿಚಾರಣೆಗೆ ಒಳಪಡಿಸಿದ ನಂತರ ನಕ್ಸಲ್ ತಂಡಕ್ಕೆ ಸೇರಿದವರು ಅಲ್ಲ ಎಂಬುದು ದೃಢಪಟ್ಟಿದೆ.