ಮಡಿಕೇರಿ: ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಯಿಂದ ಜಲಮೂಲಗಳಿಗೆ ಧಕ್ಕೆಯಾಗುತ್ತಿದೆ ಹಾಗೂ ಕಾವೇರಿ ನದಿಗೆ ನೀರಿನ ಒಳಹರಿವು ಕಡಿಮೆಯಾಗುತ್ತಿದೆ ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಂಯೋಜಕ ಕರ್ನಲ್ ಸಿ ಮುತ್ತಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ನಗರ ಗಂಭೀರವಾದ ನೀರಿನ ಸಮಸ್ಯೆಯಿಂದ ಬಳಲುತ್ತಿದೆ ಅಲ್ಲಿನ ನಾಗರಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಇದಕ್ಕೆ ಆನಿಯಂತ್ರಿತ ನಾಗರೀಕರಣ ಮತ್ತು ಕೊಡಗಿನಲಾಗುತ್ತಿರುವ ವಾಣಿಜ್ಯ ಭೂ ಪರಿವರ್ತನೆಗಳು ಕಾರಣವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಕೂಡಲೇ ವಾಣಿಜ್ಯ ಭೂ ಪರಿವರ್ತನೆ ಆದೇಶ ನೀಡುವುದನ್ನು ನಿಲ್ಲಿಸಬೇಕು. ಹಾಗೆಯೇ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಗೆ ಎನ್ ಓ ಸಿ ನೀಡದಂತೆ ನಿರ್ಣಯ ಕೈಗೊಳ್ಳುವಂತಾಗಬೇಕು. ಕೊಡಗಿನ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಬಾರಿ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ನೀಡಿದರು.
ಹೊರ ರಾಜ್ಯದ ಹೊರದೇಶದ ಹಲವು ಸಿರಿವಂತರು ಕೊಡಗಿಗೆ ಲಗ್ಗೆ ಇಟ್ಟು ರೆಸಾರ್ಟ್ ಮತ್ತಿತರ ವಾಣಿಜ್ಯ ಚಟುವಟಿಕೆಯನ್ನು ಆರಂಭಿಸಲು ಭೂಮಿಯನ್ನು ಖರೀದಿಸಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಯನ್ನು ಮಾಡಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಪ್ರಮುಖರಾದ ಮೋದೂರು ಶಿವಶಂಕರ್, ಗೋಪಿನಾಥ್ ತಿಮ್ಮಯ್ಯ, ಹಾಗೂ ಶ್ಯಾಮ್ ಬೋಪಯ್ಯ ಉಪಸ್ಥಿತರಿದ್ದರು.