ಸುಂಟಿಕೊಪ್ಪ: ಕಳೆದೊಂದು ವಾರದಿಂದ ಈ ಭಾಗದಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆಹಿಡಿದಿದ್ದಾರೆ. 18-20 ವರ್ಷ ಪ್ರಾಯದ ಕಾಡನೆ ದಾಳಿಗೆ ಸಿಲುಕಿ ಇತ್ತೀಚೆಗೆ ಅರಣ್ಯ ಸಿಬ್ಬಂದಿ ಗಿರೀಶ್ ಎಂಬುವರು ಮೃತಪಟ್ಟಿದ್ದರು.
ಹಲವು ವಾಹನಗಳನ್ನು ಧ್ವಂಸಗೊಳಿಸಿದ್ದ ಈ ಆನೆ ತೋಟಗಳಲ್ಲಿದ್ದ ಬೆಳೆಗಳನ್ನು ನಾಶಪಡಿಸಿತ್ತು. ವಾಹನ ಸವಾರರ ಮೇಲೆ ಎರಗಿ ಅವರನ್ನು ಗಾಯಗೊಳಿಸುತ್ತಿತ್ತು. ಇದರಿಂದ ಕೆದಿಕಲ್ ವ್ಯಾಪ್ತಿಯಲ್ಲಿ ಜನರು ಓಡಾಡುವುದಕ್ಕೆ ಭಯಪಡುವ ವಾತಾವರಣ ಸೃಷ್ಟಿಯಾಗಿತ್ತು.
ದುಬಾರೆ ಆನೆ ಶಿಬಿರದ ಹರ್ಷ, ಪ್ರಶಾಂತ, ಅಜಯ್, ಲಕ್ಷ್ಮಣ, ವಿಕ್ರಮ ಎಂಬ 5 ಸಾಕಾನೆಗಳ ನೆರವಿನಿಂದ ಸುಮಾರು ನೂರು ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಸಾಹಸಪಟ್ಟು ಆನೆಯನ್ನು ಸೆರೆಹಿಡಿದಿದ್ದಾರೆ.