ಸುಂಟಿಕೊಪ್ಪ. ಡಿ.16: ಸುಂಟಿಕೊಪ್ಪದಲ್ಲಿ ತಾಜ್ಯ ನೀರು ಮರು ಸಂಸ್ಕರಣ ಘಟಕ ನಿರ್ಮಾಣ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆ ನೇರವೇರಿಸುವ ಮೂಲಕ ಚಾಲನೆ ನೀಡಿದರು.
ಸುಂಟಿಕೊಪ್ಪ ಗ್ರಾ.ಪಂ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸಲಾದ ನೀರನ್ನು ಊರಿನ ಗಿಡಗಳಿಗೆ ಮತ್ತು ಇತರ ಉದ್ದೇಶಗಳಿಗೆ ಬಳಸಬಹುದಾಗಿದೆ. ರೂ.80 ಲಕ್ಷದ ಈ ಘಟಕವು ಜಿಲ್ಲೆಯಲ್ಲಿ 13 ಗ್ರಾಮ ಪಂಚಾಯಿತಿಗಳಿಗೆ ಮಂಜೂರಾಗಿದ್ದು, ಭಾಗಮಂಡಲದ ಬಳಿಕ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆಯಲ್ಲಿ ಈ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದ ಅವರು, ನೀರಿನ ಮಿತವ್ಯಯ ಮತ್ತು ಮರುಬಳಕೆಗೆ ಸಾಕಷ್ಟು ಸಹಾಯಕಾರಿಯಾಗಿದೆ ಎಂದು ಹೇಳಿದರು.
ಈ ಯೋಜನೆ ಮತ್ತು ಘಟಕದ ಪ್ರಯೋಜನವನ್ನು ಸಾರ್ವಜನಿಕರು ಹೊಂದುವಂತಾಗಬೇಕು ಆ ಮೂಲಕ ನಮ್ಮ ಪರಿಸರ ನಮ್ಮ ಗ್ರಾಮವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಕೈಜೋಡಿಸಬೇಕೆಂದು ಕರೆ ನೀಡಿದರು.
ಕೆಂದ್ರ ಸರಕಾರದ ಜಲಜೀವನ್ ಮೀಷನ್ ಯೋಜನೆಯ ಮೂಲಕ ಮನೆ ಮನೆಗೆ ನಲ್ಲಿ ಸಂಪರ್ಕದ ಮೂಲಕ ಪ್ರತಿಯೊಬ್ಬ ನಾಗರೀಕರಿಗೆ ತಲಾ ನೂರು ಲೀಟರ್ ನೀರು ಒದಗಿಸುವ ಉದ್ದೇಶವನ್ನು ಹೊಂದಲಾಗಿದ್ದು, ನಿಗಧಿತ ಕಾಲಮಿತಿಯಲ್ಲಿ ಯೋಜನೆ ಜಾರಿಗೊಳ್ಳಲಿದೆ ಎಂದು ಹೇಳಿದರು.