ಸುಂಟಿಕೊಪ್ಪ ಡಿ.21: ದೈವಾರಾಧನೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ದೈವಾರಾದಕರು ಪುರಾತನ ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ ಎಂದು ಕುಶಾಲನಗರ ವೃತ್ತದ ಡಿವೈಎಸ್ಪಿ ಗಂಗಾಧರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಂಟಿಕೊಪ್ಪ ಗುಂಡುಗುಟ್ಟಿ ಮಂಜುನಾಥಯ್ಯ ಕಲ್ಯಾಣ ಮಂಟಪದಲ್ಲಿ ಕೊಡಗು ಜಿಲ್ಲಾ ಬುದ್ಧ ಪ್ರತಿಷ್ಠಾನದ ವತಿಯಿಂದ ಸುಂಟಿಕೊಪ್ಪ ಹೋಬಳಿಯ ದೈವಾರಾದಕರು, ದೈವದೇವತೆಗಳ ನರ್ತಕರಿಗೆ ಏರ್ಪಡಿಸಲಾದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಉಡಾಯಿಸುವ ಮುನ್ನ ದೇವರಿಗೆ ಪೂಜೆ ಸಲ್ಲಿಸಿ ಅನಂತರ ಉಡಾಯಿಸುತ್ತಾರೆ. ದೀಪ ಬೆಳಗಿಸದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಕಾರ್ಯ ನಡೆಯುವುದಿಲ್ಲ. ದೈವಾರಾಧಕರನ್ನು ಗುರುತಿಸುವ ಮಹತ್ವದ ಕೆಲಸ ಎಂದು ಶ್ಲಾಘೀಸಿದರು.
ಕೊಡಗು ಜಿಲ್ಲಾ ಗತವಿಧಿ ಸಾಮರಸ್ಯ ವೇದಿಕೆ ಸಂಯೋಜಕ ಡಿ.ನರಸಿಂಹ ಮಾತನಾಡಿ, ಕರಾವಳಿ ಭಾಗದ ಜನರು ದೈವಾರಾಧನೆ, ಭೂತರಾಧನೆಯಿಂದ ಕೊಡಗಿನಲ್ಲಿಯೂ ಬದುಕನ್ನು ಕಟ್ಟಿಕೊಂಡಿದ್ದಾರೆ. ದೈವಾರಾಧಕರನ್ನು ನಂಬಿದ ಜನರಿಗೆ ಸೂಕ್ತ ಪರಿಹಾರ, ಆರೋಗ್ಯ, ಐಶ್ವರ್ಯ ಲಭಿಸುತ್ತಿದೆ. ಇವರನ್ನು ಗುರುತಿಸುವ ಕೆಲಸ ಮಾಡಿರುವುದು ಸಂತಸ ತಂದಿದೆ ಎಂದರು.
ಸಂಗಮ ಟಿ.ವಿ.ಪ್ರಧಾನ ಸಂಪಾದಕ ಹಾಗೂ ವಂಶಿ ನ್ಯೂಸ್ ಸಂಪಾದಕ ಡಾ.ಹೆಚ್.ಎಂ.ರಘು ಮಾತನಾಡಿ, ದೈವಾರಾದಕರು ಸಮಾಜದಲ್ಲಿ ತನ್ನದೇ ರೀತಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ದೈವಾರಾಧಕರ ಕೊಡುಗೆ ಇದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಬುದ್ಧ ಪ್ರತಿಷ್ಠಾನದ ಧರ್ಮಾಧಿಕಾರಿ ಹೆಚ್.ಪಿ.ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 20 ಮಂದಿ ಪುರುಷರು ಸೇರಿದಂತೆ ಮಹಿಳಾ ದೈವಾರಾದಕರನ್ನು ಇದೇ ಸಂದರ್ಭ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಹೆಚ್.ಟಿ.ಕಾವೇರಪ್ಪ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಿ.ಸಂತೋಷ್, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತ ಹೆಚ್.ಎಸ್.ಬೆಟ್ಟಪ್ಪ ಹಾಜರಿದ್ದರು.