ಸೋಮವಾರ ಪೇಟೆ : ಕಣ್ಣು ಹಾಯಿಸಿದಷ್ಟೂ ಹಚ್ಚ ಹಸಿರಿನ ನಿತ್ಯ ಹರಿದ್ವರ್ಣ ಅರಣ್ಯದ ಹೊದಿಕೆ , ಮೋಡಗಳಿಗೆ ಮುತ್ತಿಕ್ಕುವಂತಿರುವ ಹತ್ತಾರು ಬೆಟ್ಟಗಳು, ಆ ಗಿರಿ ಕಂದರಗಳ ನಡುವೆ ಹರಿಯುವ ಕುಮಾರಧಾರಾ ನದಿ, ಹಕ್ಕಿಗಳ ಚಿಲಿಪಿಲಿ ಕಲರವ ತಟ್ಟನೆ ಹಿಮಾಲಯಕ್ಕೆ ಹೋದ ಅನುಭವ. ಇದೆಲ್ಲವೂ ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಬಿಸಿಲೆ ಘಾಟಿಯ ಸಮೀಪದ ಪಟ್ಲ ಬೆಟ್ಟದ ಮೇಲಿನಿಂದ ಕಾಣುವ ಸುಂದರ ದೃಶ್ಯ ವೈಭವ.
ಸಕಲೇಶಪುರ ತಾಲ್ಲೂಕಿನ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಬೆಟ್ಟ ಶ್ರೇಣಿಯಲ್ಲಿರುವ ಈ ಬೆಟ್ಟ ನೋಡುಗರನ್ನು ನಿಬ್ಬೆರಗಾಗಿಸದೇ ಇರದು. ಈ ಬೆಟ್ಟದ ವಿಶೇಷ ಎಂದರೆ, ಪಟ್ಲ ಬೆಟ್ಟ ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿದೆ, ಈ ಮೂರು ಜಿಲ್ಲೆಗಳ ಗಡಿ ರೇಖೆಯನ್ನು ಈ ಬೆಟ್ಟ ಪ್ರತಿನಿಧಿಸುತ್ತದೆ. ಬೆಟ್ಟದ ತುದಿ ತಲುಪುತ್ತಿದ್ದಂತೆ ಅಲ್ಲಿಯ ಸುಂದರ ದೃಶ್ಯಾವಳಿ ಗಳನ್ನೂ ನೋಡುತ್ತಲೇ ಅಲ್ಲಿನ ತಂಗಾಳಿಗೆ ಮಾಯವಾಗುತ್ತದೆ. ಬೆಟ್ಟ ಹತ್ತಿದ ಆಯಾಸವೆಲ್ಲಾ ಮಾಯವಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಪಟ್ಲ ಬೆಟ್ಟದ ಮೇಲಿನಿಂದ ಒಂದು ದಿಕ್ಕಿಗೆ ಕೊಡಗು ಜಿಲ್ಲೆಯ ಮಲ್ಲಳ್ಳಿ ಜಲಪಾತ, ಇನ್ನೊಂದು ಕಡೆ ವ್ಯೂ ಪಾಯಿಂಟ್ ಕಾಣಿಸುತ್ತದೆ. ಬೆಟ್ಟದ ಎದುರಿಗೆ ಪುಷ್ಪಗಿರಿ ವನ್ಯದಾಮದ ಜೋಡಿ ಬೆಟ್ಟಗಳು ತಲೆ ಎತ್ತಿ ನಿಂತಿವೆ. ಈ ಎಲ್ಲಾ ಬೆಟ್ಟಗಳ ಸಾಲನ್ನು
ಕುಮಾರ ಧಾರ ನದಿ ಸೀಳಿಕೊಂಡು ಹೋಗಿವೆ. ಸೋಮವಾರಪೇಟೆಯಿಂದ ಸುಬ್ರಮಣ್ಯಕ್ಕೆ ಹೋಗುವ ದಾರಿಯಲ್ಲಿ 30 ಕಿಲೋಮೀಟರ್ ಕ್ರಮಿಸಿದರೆ ಈ ಸುಂದರ ದೃಶ್ಯ ಕಾಣಸಿಗುತ್ತದೆ.
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಿಸ್ಲೆ ವ್ಯೂ ಪಾಯಿಂಟ್ ಗೂ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ ಆದರೆ ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಭೇಟಿ ಕೊಂಚ ಕಡಿಮೆ ಇದ್ದರೂ ಇತ್ತೀಚೆಗೆ ಇದು ಪ್ರಚಾರ ಪಡೆದುಕೊಳ್ಳುತಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ.
ಆದರೆ ಸುಬ್ರಮಣ್ಯಕ್ಕೆ ತೆರಳುವ ರಸ್ತೆಯಿಂದ ಬೆಟ್ಟಕ್ಕೆ ತೆರಳಲು ಎರಡು ಕಿಲೋಮೀಟರ್ ಕಡಿದಾದ ದಾರಿ ಕ್ರಮಿಸಬೇಕಿದೆ. ಇರುವ ಕಚ್ಚಾ ರಸ್ತೆಯಲ್ಲಿ ಪಿಕಪ್ ಅಥವಾ ಜೀಪ್ ಮಾತ್ರ ಚಲಿಸುತ್ತದೆ. ಈ ಎರಡು ಕಿಲೋಮೀಟರ್ ದೂರ ತೆರಳಿ ಹಿಂತಿರುಗಲು ಸ್ಥಳೀಯ ಪಿಕಪ್ ಚಾಲಕರು ಪ್ರವಾಸಿಗರ ಸುಲಿಗೆಯಲ್ಲಿ ತೊಡಗಿದ್ದಾರೆ. ಇಲ್ಲಿ ಒಬ್ಬರಿಗೆ ಸಾವಿರ ರೂಪಾಯಿ ದರ ವಿಧಿಸಲಾಗುತ್ತಿದೆ!.
ಬಿಳಿ ಬೋರ್ಡ್ ನ ಖಾಸಗಿ ಪಿಕಪ್ ಗಳನ್ನು ಹೊಂದಿರುವ 4-5 ವಾಹನ ಮಾಲಿಕರು ಬೆಟ್ಟಕ್ಕೆ ಖಾಸಗಿ ವಾಹನಗಳ ಮೂಲಕ ಸಂಚರಿಸಲು ಅವಕಾಶ ನೀಡುತ್ತಿಲ್ಲ. ಒಂದು ವೇಳೆ ಖಾಸಗಿ ಜೀಪುಗಳ ಮೂಲಕ ಸಂಚರಿಸಿದರೇ ಏನೇನೋ ನೆಪವೊಡ್ಡಿ
ಜಗಳಕ್ಕೆ ಬರುತ್ತಾರೆ ಮತ್ತು ಹಲ್ಲೆಗೆ ಮುಂದಾಗುತ್ತಾರೆ. ಗೂಡ್ಸ್ ವಾಹನದಲ್ಲಿ ಪ್ರವಾಸಿಗರನ್ನು ಸಾಗಿಸಿ ಏನಾದರು ಅವಘಡ ಸಂಭವಿಸಿದರೆ ಇನ್ಸೂರೆನ್ಸ್ ಕ್ಲೈಮ್ ಆಗುವುದಿಲ್ಲ. ಆದರೆ ಪೋಲೀಸರಾಗಲೀ , ಆರ್ಟಿಓ ಅಧಿಕಾರಿಗಳಾಗಲೀ ಈ ಪಿಕಪ್ ವಾಹನ
ದಂಧೆಗೆ ಕಡಿವಾಣ ಹಾಕಿಲ್ಲವಾಗಿರುವದರಿಂದ ಈ ದಂಧೆ ಮುಂದುವರೆದಿದೆ.
ರಸ್ತೆಯಲ್ಲಿ ಹಲವು ಪಿಕಪ್ ಗಳು ಮಗುಚಿ ಬಿದ್ದು, ಪ್ರವಾಸಿಗರಿಗೆ ಗಾಯಗಳಾದ ಘಟನೆಯೂ ನಡೆದಿದೆ ಎನ್ನುತ್ತಾರೆ ಬೆಂಗಳೂರಿನ ಪ್ರವಾಸಿಗರೊಬ್ಬರು. ಅರಣ್ಯ ಇಲಾಖೆ ಪ್ರಕಾರ ಪಟ್ಲ ಬೆಟ್ಟಕ್ಕೆ ಪ್ರವೇಶ ನಿರ್ಬಂಧವಿದೆ. ಮೀಸಲು ಅರಣ್ಯ ವ್ಯಾಪ್ರಿಗೆ ಬರುವುದರಿಂದ ಸಾರ್ವಜನಿಕರು ಅನುಮತಿ ಇಲ್ಲದೆ ಒಳ ಪ್ರವೇಶಿಸುವುದು ಅಪರಾದ ಆಗುತ್ತದೆ. ಆದರೆ ಅಲ್ಲಿ ಒಬ್ಬನೇ ಒಬ್ಬ ಅರಣ್ಯ ಇಲಾಖೆ ಸಿಬ್ಬಂದಿಯೂ ಇಲ್ಲ. ಪಿಕಪ್ ವಾಹನದವರು ಪ್ರವಾಸಿಗರೊಂದಿಗೆ ನಡೆದುಕೊಳ್ಳುವ ರೀತಿಯ ವಿರುದ್ಧ ದೂರು ನೀಡಲು ಅಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯೂ ಇದೆ. ಅಲ್ಲಿ ಪೊಲೀಸ್ ಠಾಣೆಯ ಮಾಹಿತಿ ಬೋರ್ಡ್ ಕೂಡ ಇಲ್ಲ. ಸ್ಥಳಿಯ ಪೊಲೀಸ್ ಸಿಬ್ಬಂದಿಯೂ ಅಲ್ಲಿ ಭದ್ರತೆಗಿಲ್ಲ.
ಈ ಕುರಿತು ಸ್ಥಳೀಯ ಯಸಳೂರು ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ಸೋಮಶೇಖರ್ ಅವರನ್ನು ಪ್ರಶ್ನಿಸಿದಾಗ ಪಟ್ಲ ಬೆಟ್ಟಕ್ಕೆ ತೆರಳುವ ರಸ್ತೆಯು ಗೋಮಾಳ ಜಾಗ , ಖಾಸಗೀ ಜಾಗ ಮತ್ತು ಅರಣ್ಯ ಇಲಾಖೆಯ ಜಾಗವೂ ಆಗಿದ್ದು ಈಗಾಗಲೇ ಗ್ರಾಮ ಅರಣ್ಯ ಸಮಿತಿ ರಚಿಸಲು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಕಳಿಸಲಾಗಿದೆ. ಶೀಘ್ರದಲ್ಲಿ ಅರಣ್ಯ ಸಮಿತಿಯು ಪಟ್ಲ ಬೆಟ್ಟಕ್ಕೆ ತೆರಳುವ ರಸ್ತೆ ಸಂಚಾರವನ್ನು ನಿಯಂತ್ರಿಸಲಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯು ಈ ಎರಡು ಕಿಮಿ ರಸ್ತೆಯ ಕೆಲ ಭಾಗಕ್ಕಾದರೂ ಕಾಂಕ್ರೀಟ್ ಹಾಕಿಸಿದರೆ ಇದೊಂದು ವಾರಾಂತ್ಯದ ಸುಂದರ ಪ್ರವಾಸಿ ತಾಣವಾಗಲಿದೆ. ಸಕಲೇಶಪುರ ತಾಲ್ಲೂಕಿಗೆ ಸೇರಿರುವ ಈ ಬೆಟ್ಟ ವಣಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದೆ.
ಇಲ್ಲಿಂದ ಕೇವಲ 6 ಕಿಮಿ ದೂರದಲ್ಲಿ ಬಿಸ್ಲೆ ವ್ಯೂ ಪಾಯಿಂಟ್ ಇರುವುದು ಪ್ರವಾಸೋದ್ಯಮ ಬೆಳವಣಿಗೆಗೂ ಸಹಾಯಕವಾಗಲಿದೆ.