ಕೊಡಗು: ಅನೇಕ ಸಂಸ್ಕೃತಿ ಸಂಭವಗಳಿಗೆ ನೆಲೆಯಾದ್ದು, ಪ್ರೇರಕವಾದದ್ದು ಕೊಡಗಿನ ನೆಲ. ಈ ಹಿನ್ನಲೆಯಲ್ಲಿ ವಿವಿಧ ಸಮುದಾಯಗಳಿಗೆ ಸಂಸ್ಕೃತಿ ಹಿನ್ನಲೆ ಇದೆ. ಈ ಪದಕೋಶ ಕೇವಲ ಭಾಷಿಕವಲ್ಲ,ಸಂಸ್ಕೃತಿ ಕೋಶವಾಗಿದೆ. ಈ ಪದ ಕೋಶವು ಎಲ್ಲಾ ಜನರಿಗೆ ತಲುಪುವಂತಾಗಲು ಆನ್ಲೈನ್ ನಲ್ಲಿ ಮಾಧ್ಯ,ಮವನ್ನು ಬಳಸಿಕೊಂಡಿರುವುದು ಬಹಳ ಉತ್ತಮ ಎಂದು ಮುಂಬೈ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಪಕರಾದ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.
ಇವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಹೊರತಲಾಗಿರುವ ಅರೆಭಾಷೆ ಪದಕೋಶ(ಅರೆಭಾಷೆ-ಕನ್ನಡ- ಇಂಗ್ಲೀಷ್) ಪುಸ್ತಕವನ್ನು ಭತ್ತದ ರಾಶಿಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಾರತವು ಭಾಷಾ ವೈವಿದ್ಯತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಹಲವು ಪ್ರಾಂತ್ಯ, ಪ್ರದೇಶಗಳ ವೈವಿದ್ಯತೆಯನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾಷೆ ಉಳಿದಲ್ಲಿ ಜನಾಂಗವು ಸಹ ಉಳಿಯಲು ಸಾಧ್ಯ ಎಂದರು.
ಒಂದು ಕೋಶ ಎನ್ನುವಂತದ್ದು ಬಹಳ ಸುಧೀರ್ಘವಾದ ಹಾಗೂ ಶಾಸ್ತ್ರೀಯವಾದ ಒಂದು ಪ್ರವರ್ತನೆಯಾಗಿ ನಮ್ಮ ದೇಶದಲ್ಲಿ ಬೇಳೆಯುತ್ತಾ ಬಂದಿದೆ. ಇವೆಲ್ಲದ್ದಕ್ಕೂ ಕೂಡ ನಾಂದಿ ಹಾಡಿದ್ದು ವಿಶೇಷವಾಗಿ ಮಹರಾಷ್ಟ್ರದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಅಣ್ಣಾಮಲೈ ಯೂನಿವರ್ಸಿಟಿಗಳು ಕೋಶ ವಿಜ್ಞಾನ ಎನ್ನವುವಂತಹದ್ದು ವಿಷಯವನ್ನು ಬೆಳೆದುಕೊಂಡು ಬಂದಿದೆ ಎಂದರು.
ಒಂದು ಶಾಸ್ತ್ರ ಎಂದರೆ ಅದು ಕಬ್ಬಿಣದ ಕಡಲೆ ಎನ್ನುವ ಮನೋಭಾವ ಬಹಳ ಜನರಿಗಿದೆ. ಅದು ಅಂದಕೊಂಡಂತಲ್ಲ. ಅವುಗಳ ಅರ್ಥವನ್ನು ತಿಳಿದುಕೊಳ್ಳಬೇಕಾದರೆ ಅಥವಾ ಅವುಗಳ ಸ್ವಾರಸ್ಯ ತಿಳಿಯಬೇಕಾದರೆ ಕೋಶಗಳನ್ನು ಓದಬೇಕು .ಅಕಾಡೆಮಿ ಕೆಲಸಗಳು ದಾಖಲೆ ಮೂಲಕ ಮಾತನಾಡುತ್ತಿವೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶ, ಪಾರಂಪರಿಕ ವಸ್ತುಕೋಶ ಹೀಗೆ ಹಲವು ಪುಸ್ತಕಗಳನ್ನು ಹೊರತಂದಿರುವುದು ಮೆಚ್ಚುವಂತದ್ದು ಎಂದು ಹೇಳಿದರು.
ಕನ್ನಡ ಉಪ ಭಾಷೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರವು ಸಹ ಅಕಾಡೆಮಿ ಮೂಲಕ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಮೂಲಕ ಪದಕೋಶವನ್ನು ಹೊರತಂದಿರುವುದು ಶ್ಲಾಘನಿಯ. ಅಪೂರ್ವ ಕೃತಿಗಳು, ಭಾಷಾ ಉಲ್ಲೇಖಗಳು, ಐತಿಹಾಸಿಕ ದಾಖಲೆಗಳು, ಅರೆಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.
‘ಕನ್ನಡ ಉಪ ಭಾಷೆಗಳು ಕೂಡ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಆದ್ದರಿಂದ ಸಾಂಸ್ಕತಿಕ ಭಾಷಾ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಆಚರಣೆ, ಆರಾಧನೆ, ಭಾವನೆಗಳು ವಿಭಿನ್ನವಾಗಿದ್ದರೂ ಸಹ, ಮೂಲ ಭಾಷಾ ಸಂಸ್ಕತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕಿದೆ ಎಂದು ತಾಳ್ತಜೆ ವಸಂತ ಕುಮಾರ್ ಅವರು ನುಡಿದರು.’
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆ ಗದ್ದೆ ಮಾತನಾಡಿ ಈ ಅರೆಭಾಷೆ ಪದಕೋಶವನ್ನು ಹಂದಿನೆಂಟು ತಿಂಗಳಲ್ಲಿ ತಯಾರು ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಈ ಪದ ಕೋಶ ಯೂನಿಕೋಡ್ನಲ್ಲಿ ತಯಾರಾದ ಮೊದಲ ಪದಕೋಶವಾಗಿದೆ ಎನ್ನುವುದಕ್ಕೆ ಹೆಮ್ಮೆ ಇದೆ. ಈ ಭಾಷೆ ಕೇವಲ ಮಾತನಾಡಿದರೆ ಸಾಲದು ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಅಕಾಡೆಮಿ ಮೂಲಕ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶವು ಮಹತ್ವದ ಕಾರ್ಯವಾಗಿದೆ ಎಂದು ಅವರು ಬಣ್ಣಿಸಿದರು.
ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಅವರು ಮಾತನಾಡಿ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯ ಉಳಿಯಬೇಕಾದರೆ ದಾಖಲೆಗಳು ಅಗತ್ಯ. ಆ ನಿಟ್ಟಿನಲ್ಲಿ ಅಕಾಡಮಿ ವತಿಯಿಂದ ಹಲವು ಪ್ರಮುಖ ಪುಸ್ತಕಗಳನ್ನು ಪ್ರಕಟಿಸಿರುವುದು ಶ್ಲಾಘನೀಯ ಎಂದರು.
ಅರೆಭಾಷೆ ಪದಕೋಶ ಕಾರ್ಯವು ಮಹತ್ತರವಾಗಿದೆ. ಮಕ್ಕಳಿಗೆ ಅರೆಭಾಷೆಯನ್ನು ಕಲಿಸಬೇಕು. ಅರೆಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮಾತೃಭಾಷೆಯನ್ನು ಮರೆಯಬಾರದು ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿ ಅಕಾಡೆಮಿ ಸದಸ್ಯರು ಉದ್ಯೋಗದಲ್ಲಿದ್ದು ಅರೆಭಾಷೆ ಪದಕೋಶ ಹೊರತಂದಿದ್ದಾರೆ. ಅರೆಭಾಷೆಯಲ್ಲಿ ಇದೊಂದು ಮಹತ್ತರ ದಾಖಲೆ ಆಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶ ಮತ್ತು ಪಾರಂಪರಿಕ ವಸ್ತುಕೋಶವನ್ನು ಪ್ರತಿ ಮನೆಯಲ್ಲೂ ಜತನ ಮಾಡಿ ಮಕ್ಕಳಿಗೆ ಓದುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅರೆಭಾಷೆ ಮಾತನಾಡುವವರು ಕಡಿಮೆ ಆಗುತ್ತಿದ್ದಾರೆ. ಕನ್ನಡ, ಅರೆಭಾಷೆಯ ಜೊತೆಗೆ ಇತರೆ ಭಾಷೆಗಳನ್ನು ಮಾತನಾಡುವಂತಾಗಬೇಕು ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ರಾಜೇಶ್ ತೇನನ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಬೆಳವಣಿಗೆಗೆ ಅಕಾಡೆಮಿ ಅಧ್ಯಕ್ಷರು ಉತ್ತಮ ಕೆಲಸ ಮಾಡಿದ್ದಾರೆ. ಅರೆಭಾಷೆ ಪದಕೋಶವು ಇತಿಹಾಸ ಪುಟದಲ್ಲಿ ಸೇರಿದೆ. ‘ಸಾಹೇಬ್ರು ಬಂದವೇ’ ನಾಟಕವು ಅರೆಭಾಷೆ ಸಂಸ್ಕತಿ ಬೆಳವಣಿಗೆಗೆ ಸಹಕಾರಿಯಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಒಳ್ಳೆಯ ಕೆಲಸ ಮಾಡುವವರಿಗೆ ಬೆನ್ನು ತಟ್ಟುವಂತಾಗಬೇಕು ಎಂದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕುಂಜಿಲನ ಮುತ್ತಮ್ಮ ಅವರು ಮಾತನಾಡಿ ಅರೆಭಾಷೆ ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಅಕಾಡೆಮಿ ಹಿಂದಿನ ಅರ್ಥ ಸದಸ್ಯರಾದ ಕೆ.ಟಿ.ದರ್ಶನಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಅಕಾಡೆಮಿ ಅಧ್ಯಕ್ಷರ ಅವಧಿಯಲ್ಲಿ ಚಿತ್ರಕಲಾ ಪ್ರದರ್ಶನ, ಸಾಹೇಬ್ರು ಬಂದವೇ ನಾಟಕ ಪ್ರದರ್ಶನ, ಅರೆಭಾಷೆ ಪದಕೋಶ, ಅರೆಭಾಷೆ ಪಾರಂಪರಿಕ ವಸ್ತುಕೋಶ ಹೀಗೆ ಹಲವು ಕಾರ್ಯಗಳು ಅರೆಭಾಷೆ ಭಾಷೆ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರೆ ಭಾಷೆ ಪದಕೋಶದ ಸಂಚಾಲಕರಾದ ಹಾಗೂ ಅರೆಭಾಷೆ ಅಕಾಡೆಮಿ ಸದಸ್ಯರಾದ ಡಾ.ವಿಶ್ವನಾಥ ಬದಿಕಾನ ಅವರು ಮಾತನಾಡಿ 18 ತಿಂಗಳಲ್ಲಿ 18 ಸಾವಿರ ಪದಗಳ ಮೊದಲ ಯೂನಿಕೋಡ್ನ ಡಿಸ್ಟನರಿ ಹೊತ್ತಿಗೆ ಪ್ರಕಟಿಸಿರುವುದು ವಿಶೇಷವಾಗಿದೆ. ಅರೆಭಾಷೆ ಪ್ರದೇಶದ ಮನೆತನ, ಜಾಗದ ಹೆಸರು, ಗಾದೆಗಳು, ಒಗಟು, ನುಡಿಗಟ್ಟು, ಪ್ರಯೋಗ ವಾಕ್ಯ, ಹೀಗೆ ಹಲವು ಅಧ್ಯಯನಗಳನ್ನು ಅರೆಭಾಷೆ ಪದಕೋಶ ಒಳಗೊಂಡಿದೆ ಎಂದು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅರೆಭಾಷೆ ಪದಕೋಶ ಸಂಗ್ರಹಿಸುವಲ್ಲಿ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕೆಂಜನ ಮಮತ ಪ್ರಸಾದ್, ಎಂ.ಜಿ.ಜೀವನ್, ಸುನಿಲ್ ಕುಮಾರ್ ಬಿ.ಬಿ., ಚೈತ್ರ ಪಿ., ರುಚಿತಾ ಎ.ಎಸ್., ಕೋಟೇರ ಶೃತಿ ಕಿಶೋರ್, ದರ್ಶಿನಿ, ಡೀನಾ ಜಿ.ಕೆ. ಗೂಡಂಜಿ ಮನೆ ಇವರಿಗೆ ನೆನಪಿನ ಕಾಣಿಕೆ, ಶಾಲೂ, ಪುಸ್ತಕ ನೀಡಿ ಸನ್ಮಾನಿಸಲಾಯಿತು. ಅರೆಭಾಷೆ ಪದಕೋಶ ಕರಡು ಪ್ರತಿ ತಿದ್ದುವ ಕಾರ್ಯ ಮಾಡಿದ ಬಾರಿಯಂಡ ಜೋಯಪ್ಪ ಅವರನ್ನು ಗೌರವಿಸಲಾಯಿತು.
ಕೊಡಗು ಗೌಡ ಸಮಾಜಗಳ ಒಕ್ಕೂಟ ಮಡಿಕೇರಿ ಇದರ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೊಯಪ್ಪ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಲಿನ ಮುತ್ತಮ್ಮ, ಕೊಡಗು ಗೌಡ ಸಮಾಜಗಳ ಒಕ್ಕೂಟ ಮಡಿಕೇರಿ ಇದರ ನಿರ್ದೇಶಕರಾದ ರಾಜೇಶ್ ತೇನನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೆರಿಯನ ಜಯಾನಂದ, ರಿಜಿಸ್ಟಾರ್ ಚಿನ್ನಸ್ವಾಮಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಜಿಲ್ಲಾ ನಿರ್ದೇಶಕಿ ದರ್ಶನ ,ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಕುಸುಮಾಧರ ಎ.ಟಿ., ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಪುರುಷೋತ್ತಮ ಕಿರ್ಲಾಯ, ಡಾ.ಪುರುಷೋತ್ತಮ ಕರಂಗಲ್ಲು, ಕಿರಣ್ ಕುಂಬಳಚೇರಿ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪದಕೋಶದಲ್ಲಿ ಪದ ಸಂಗ್ರಹಣೆ ಮಾಡಿದವರಿಗೆ ಗೌರರ್ವಾಣೆ ನಡೆಯಿತು. ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು, ಪ್ರೇಮ ರಾಘವಯ್ಯ ಅರೆಭಾಷೆ ಗೀತೆ ಹಾಡಿದರು, ಅಕಾಡೆಮಿ ಸದಸ್ಯರಾದ ಧನಂಜಯ ಅಗೋಳಿಕಜೆ ನಿರೂಪಿಸಿದರು, ಡಾ.ಕೂಡಕಂಡಿ ದಯಾನಂದ ವಂದಿಸಿದರು.