ಮಡಿಕೇರಿ: ಭ್ರಷ್ಟ ವ್ಯವಸ್ಥೆ ಮತ್ತು ದುರಾಡಳಿತದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಕ್ಷ ಸಂಘಟನೆಗೆ ಎಲ್ಲರೂ ಮುಂದಾಗಬೇಕು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪಕ್ಷ ಬಲಿಷ್ಠಗೊಂಡರೆ ಜಿಲ್ಲೆಯಲ್ಲಿ ಸಂಘಟನೆ ಸುಲಭವೆಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯೆಯಾಗಿ ಕಳೆದ 6 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಆಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಕಾರ್ಯಕರ್ತರು ಹಾಗೂ ಜನರು ನೀಡಿದ ಸಹಕಾರ ಶ್ಲಾಘನಾರ್ಹವೆಂದರು.
ಅಧಿಕಾರಿಗಳ ಕರ್ತವ್ಯಲೋಪದಿಂದ ಮಡಿಕೇರಿ ನಗರಸಭೆಯ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಕೆಲವು ಅಕ್ರಮಗಳನ್ನು ತೆನ್ನಿರಾ ಮೈನಾ ಅವರು ದಾಖಲೆ ಸಹಿತ ಬಯಲಿಗೆ ತಂದಿದ್ದಾರೆ. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ಜಂಟಿಯಾಗಿ ಜಿಲ್ಲಾ ಕಾಂಗ್ರೆಸ್ ಸಹಯೋಗದಲ್ಲಿ ನಗರಸಭೆಯ ದುರಾಡಳಿತದ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ವೀಣಾ ಅಚ್ಚಯ್ಯ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಡಿಕೇರಿ ಬ್ಲಾಕ್ ಸಮಿತಿ ಅತ್ಯಂತ ಬಲಿಷ್ಠವಾಗಿದ್ದು, ಇದೇ ರೀತಿಯಲ್ಲಿ ವಲಯ ಹಾಗೂ ಬೂತ್ ಸಮಿತಿ ರಚಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಎಲ್ಲಾ ಹಿರಿಯ ಮುಖಂಡರ ಸಲಹೆ ಮತ್ತು ಸಹಕಾರದಿಂದ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ವೀಣಾ ಅಚ್ಚಯ್ಯ ಹಾಗೂ ಇತರ ಮುಖಂಡರೊಂದಿಗೆ ಪ್ರತಿ ಬೂತ್ ಗಳಿಗೆ ತೆರಳಿ ಪಕ್ಷ ಸಂಘಟಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ನೇಮಕಾತಿ ಪತ್ರ ಪಡೆದ ಪಧಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ತಕ್ಷಣ ಆರಂಭಿಸುವಂತೆ ಸೂಚಿಸಿದರು.
ಕೆಪಿಸಿಸಿ ಸಾಮಾಜಿಕ ಜಾಲತಾಣದ ಕೊಡಗು ಉಸ್ತುವಾರಿ ಜೆಲ್ಲೆಯಲ್ಲಿ ಸಾಮಾಜಿಕ ಜಾಲತಾಣದ ಸದಸ್ಯರ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ವಕ್ತಾರ ತೆನ್ನೀರ ಮೈನಾ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿ ಆಡಳಿತ ಹಲವು ವೈಫಲ್ಯಗಳನ್ನು ಕಂಡಿದೆ. ದಿನಕ್ಕೊಂದು ಹಗರಣ ಬೆಳಕಿಗೆ ತರುವಷ್ಟು ದುರಾಡಳಿತವಿದೆ. ಹೋರಾಟ ನಡೆಸಲು ಜಿಲ್ಲಾಧ್ಯಕ್ಷರು ಹಾಗೂ ಮುಖಂಡರ ಸಹಕಾರದ ಅಗತ್ಯವಿದೆ ಎಂದರು.
ಡಿಸಿಸಿ ಕಾರ್ಯದರ್ಶಿ ಮಂದ್ರಿರ ಮೋಹನ್ ದಾಸ್, ಬ್ಲಾಕ್ ಉಪಾಧ್ಯಕ್ಷ ಪ್ರಭುರೈ, ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸಂಘಟನಾ ಕಾರ್ಯದರ್ಶಿಗಳಾದ ರವೂಫ್ ಶೇಖ್, ರವಿಗೌಡ, ಖಜಾಂಚಿ ಬಲ್ಲಚಂಡ ಚಂದನ್, ಚೆರಿಯಮನೆ ಭಾರ್ಗವ, ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ ಹಲವು ಸಲಹೆಗಳನ್ನು ನೀಡಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷÀ ಬಾನಂಡ ಪ್ರಥ್ಯು, ವಕ್ತಾರ ಪಿ.ಎಲ್.ಸುರೇಶ್, ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ, ಪ್ರದೀಪ್ ಕೊಟ್ಟಕೇರಿಯನ, ನಂದ, ಕೇಶವ, ಬ್ಲಾಕ್ ಪದಾಧಿಕಾರಿಗಳಾದ ಪಡಿಯೇಟಿರ ಕವಿತಾ, ಲಿಯಾಕತ್ ಆಲಿ, ಶಿವು ಮೂರ್ನಾಡು, ಮಹಮ್ಮದ್ ಆಲಿ, ಧನಂಜಯ, ವಸಂತ್ ಭಟ್, ಪೂರ್ಣಿಮಾ, ಪ್ರೇಮ, ಹನೀಫ್, ಎಂ.ಎಂ.ಹಫೀಝ್ ಉರ್ ರೆಹಮಾನ್, ಅಣ್ಣಚ್ಚಿರ ಸತೀಶ್, ಮಾಯಿನ್, ಹೊಟ್ಟೆಂಗಡ ಉತ್ತಯ್ಯ, ಚಿಮ್ಮಚುಮ್ಮಣ್ಣ, ಜೆ.ಸಿ.ಜಗದೀಶ್, ಸೈಮನ್ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.