ಮಡಿಕೇರಿ: ಕಿಶನ್ ಫಿಲಂ ಫ್ಯಾಕ್ಟರಿ ಮೂಲಕ ನಿರ್ಮಿಸುತ್ತಿರುವ ಕನ್ನಡ ಚಲನಚಿತ್ರ ‘ಶಂಕಿತ’ ಚಿತ್ರೀಕರಣ ಮುಹೂರ್ತ ಸೋಮವಾರ ಓಂಕಾರೇಶ್ವರ ದೇವಾಲಯದಲ್ಲಿ ನೆರವೇರಿತು.
ಚಿತ್ರೀಕರಣಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಸಮಾಜ ಸೇವಕಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಚಾಲನೆ ನೀಡಿದರು. ರಾಕೇಶ್ ಶರ್ಮಾ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ನಾಯಕ ನಟನಾಗಿ ಕೊಡಗಿನ ಚೀಯಂಡಿರ ಕಿಶನ್ ಉತ್ತಪ್ಪ, ನಾಯಕಿಯಾಗಿ ರಾಜೇಶ್ವರಿ ಅಭಿನಯಿಸುತ್ತಿದ್ದಾರೆ.
ತಮ್ಮ ನೇತೃತ್ವದ ಕಿಶನ್ ಫಿಲಂ ಫ್ಯಾಕ್ಟರಿ ಮೂಲಕ ಪ್ರಥಮ ಚಿತ್ರವಾಗಿ ಶಂಕಿತ ನಿರ್ಮಾಣ ಮಾಡಲಾಗುತ್ತಿದೆ. ಕೊಡಗು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ನಾಡಹಬ್ಬ ದಸರಾ ಸಂದರ್ಭ ಚಿತ್ರ ತೆರೆಗೆ ಬರಲಿದೆ ಎಂದು ಚೀಯಂಡಿರ ಕಿಶನ್ ಉತ್ತಪ್ಪ ವಿಶ್ವಾಸ ವ್ಯಕ್ತ ಪಡಿಸಿದರು. ಮೊದಲ ಬಾರಿಗೆ ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದೇನೆ. ತುಂಬಾ ಕುತೂಹಲಭರಿತವಾಗಿದ್ದೇನೆಂದು ರಾಜೇಶ್ವರಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ, ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆ ಜಿಲ್ಲಾ ಸಂಚಾಲಕ ತೆನ್ನೀರ ಮೈನ ಮತ್ತಿತರರು ಇದ್ದರು.