ಹೊದ್ದೂರು: ಕೊಡಗು ಜಿಲ್ಲೆಯ ವಿದ್ಯುತ್ ಗ್ರಾಹಕರು ಅತ್ಯಂತ ಪ್ರಾಮಾಣಿಕವಾಗಿ ಶುಲ್ಕ ಪಾವತಿಸುತ್ತಿರುವರು. ಆದರೆ, ಜಿಲ್ಲೆಯ ಗ್ರಾಹಕರಿಗೆ ಮೈಸೂರಿನ ಸಹಾಯವಾಣಿಯಿಂದ ಸಕಾಲಿಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪಿಸುವ ಅಗತ್ಯದ ಬಗ್ಗೆ ಒತ್ತಾಯ ಕೇಳಿಬಂತು.
ಮಡಿಕೇರಿ ಉಪ ವಿಭಾಗದ ಕಛೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಹಿರಿಯಾಧಿಕಾರಿಗಳ ಗಮನ ಸೆಳೆಯಲಾಯಿತು.
ಪತ್ರಕರ್ತ ಕೂಡಂಡ ರವಿ, ಈ ಬಗ್ಗೆ ಮಾತನಾಡಿ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸಹಾಯವಾಣಿಯು ಮೈಸೂರು- ಕೊಡಗು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಅಲ್ಲಿ ಕೇವಲ ನಾಲ್ಕು ದೂರವಾಣಿ ಲೈನ್ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಆದುದರಿಂದ ಅಲ್ಲಿನ ಸಿಬ್ಬಂದಿ ವರ್ಗ ಕೊಡಗು ಜಿಲ್ಲೆಯ ಗ್ರಾಹಕರ ಕರೆಗಳಿಗೆ ಸಕರಾತ್ಮಕ ಸ್ಪಂದನೆ ನೀಡುತ್ತಿಲ್ಲ. ದೂರುಗಳೇ ನೋಂದಣಿಯಾಗುತ್ತಿಲ್ಲ. ಇದರಿಂದ ಜಿಲ್ಲೆಯ ಗ್ರಾಹಕರು ಸಮಸ್ಯೆಗಳನ್ನು ಎದುರಿಸುತ್ತಿರುವರು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ವ್ಯಾಪ್ತಿಗೆ ಸೀಮಿತವಾದ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕೆಂದು ರವಿ ಒತ್ತಾಯಿಸಿದರು.
ಜಿಲ್ಲೆಯ ಗ್ರಾಮೀಣ ಭಾಗದವರು ನಿರಂತರ ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತ್ತ ಸೀಮೆಣ್ಣೆಯು ದೊರಕುತ್ತಿಲ್ಲ. ಇತ್ತ ವಿದ್ಯುತ್ ಇಲ್ಲದೆ, ಜನತೆ ಕತ್ತಲ ಕೂಪದಲ್ಲಿ ದಿನ ದೂಡುವಂತಾಗಿದೆ. ಪ್ರತೀ 10-20 ನಿಮಿಷಗಳಿಗೊಮ್ಮೆ ವಿದ್ಯುತ್ ಕಟಾವಣೆಯಿಂದ ವಿದ್ಯುತ್ ಚಾಲಿತ ಯಂತೋಪಕರಣಗಳು ಜಖಂಗೊಳ್ಳುತ್ತಿವೆ. ಮೊಬೈಲ್ ಫೋನ್ ಛಾರ್ಜಿಂಗ್ ಅಸಾಧ್ಯವಾಗಿದೆ.
ಆನ್ ಲೈನ್ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಗ್ರಾಹಕರು ಬಳಸಿದ ವಿದ್ಯುತ್ ಗೆ ಮಾತ್ರ ಶುಲ್ಕ ನೀಡಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು. ಗ್ರಾಮೀಣ ಭಾಗದಲ್ಲಿ ಪ್ರತೀ ಮನೆಯಲ್ಲಿ ಮಾಸಕ್ಕೆ ಕೇವಲ 10-15 ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ಇದರಿಂದಾಗಿ ಸೆಸ್ಕ್ ಕಾರ್ಯ ವೈಖರಿಯ ಬಗ್ಗೆ ಗ್ರಾಹಕರು ಅಸಮಾಧಾನ ಗೊಳ್ಳುತ್ತಿರುವರು ಎಂದು ಗ್ರಾಹಕರೋರ್ವರು ತಮ್ಮ ವಿದ್ಯುತ್ ಬಿಲ್ಲನ್ನು ಸಭೆಯಲ್ಲಿ ದಾಖಲೆಯಾಗಿ ಪ್ರದರ್ಶಿಸಿದರು.
ವಿದ್ಯುತ್ ಕಟಾವಣೆ ಮಾಹಿತಿ: ಗ್ರಾಮೀಣರಿಗೆ ದಿನಕ್ಕೆ ಕನಿಷ್ಠ 15 ಗಂಟೆಗೂ ಅಧಿಕ ತಡೆ ರಹಿತ ವಿದ್ಯುತ್ ನೀಡಬೇಕು. ವಿದ್ಯುತ್ ಕಟಾವಣೆಯ ಬಗ್ಗೆ ಮತ್ತು ಗ್ರಾಹಕರ ಅದಾಲತ್ ಬಗ್ಗೆ ಆಕಾಶವಾಣಿಯಲ್ಲಿ ಪ್ರಕಟಣೆಗಳನ್ನು ಸಕಾಲಿಕವಾಗಿ ನೀಡಬೇಕು ಎಂಬ ಕೂಗು ಸಭೆಯಲ್ಲಿ ಕೇಳಿ ಬಂತು. ಪ್ರತೀ ತಿಂಗಳ ಆದಾಲತ್ ಸಭೆಯ ಬಗ್ಗೆ ಕಾಲಕಾಲಕ್ಕೆ ಗ್ರಾಹಕರಿಗೆ ಮಾಹಿತಿ ನೀಡುವುದು ಇಲಾಖಾಧಿಕಾರಿಗಳ ಆದ್ಯ ಕರ್ತವ್ಯ ಎಂದು ಮತ್ತೋರ್ವ ಗ್ರಾಹಕರು ಕಿಡಿ ಕಾರಿದರು.
ಮೂರ್ನಾಡು- ಹೊದ್ದೂರು ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಇರುವ ಅಡೆ – ತಡೆಗಳನ್ನು ನಿವಾರಿಸಬೇಕು. ಪ್ರತೀ ದಿನದ ವಿದ್ಯುತ್ ಕಣ್ಣುಮುಚ್ಚಾಲೆಯನ್ನು ಕೊನೆಗಾಣಿಸಬೇಕೆಂದು ರವಿ ಬಿಗಿಪಟ್ಟು ಹಿಡಿದರು.
ಕಡಗದಾಳು ಶ್ರೀಬೊಟ್ಲಪ್ಪ ಯುವಕ ಸಂಘದ ಶೇಖರ್ ಮಾತನಾಡಿ, ಗ್ರಾಮದಲ್ಲಿ ಸಮಸ್ಯೆಯಾಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕೆಂದರು.
ಮಡಿಕೇರಿ ಉಪ ವಿಭಾಗದ ಕಾರ್ಯ ನಿರ್ವಾಹಕ ಅಭಯಂತರಾದ ಅಶೋಕ್ ಮಾತನಾಡಿ, ವಿದ್ಯುತ್ ಅದಾಲತ್ ಸಭೆಗಳಲ್ಲಿ ಅತ್ಯಧಿಕ ಸಂಖ್ಯೆಯ ಗ್ರಾಹಕರು ಭಾಗವಹಿಸಿ, ತಮ್ಮ ಅಹವಾಲುಗಳನ್ನು ಹೇಳಿ ಕೊಳ್ಳಬೇಕು. ಆಗ ಮಾತ್ರ ಸೆಸ್ಕ್ ಗೆ ಉತ್ತಮ ಸೇವೆ ನೀಡಲು ಸಾಧ್ಯ. ವಿದ್ಯುತ್ ಸಹಾಯವಾಣಿ ಕೇಂದ್ರ ಸ್ಥಾಪನೆಯ ಬಗ್ಗೆ ಹಿರಿಯಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಹೊದ್ದೂರು ಗ್ರಾಮದ ವಿದ್ಯುತ್ ಸಮಸ್ಯೆಗಳ ಕ್ಷಿಪ್ರ ಪರಿಹಾರಕ್ಕಾಗಿ ತಾವು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಭೆಯಲ್ಲಿ ನಾಪೋಕ್ಲು ಶಾಖಾಧಿಕಾರಿಗಳಾದ ಹರೀಶ್ ಹೆಚ್. ಆರ್, ಮಡಿಕೇರಿ ನಗರದ ಶಾಖಾಧಿಕಾರಿ ಸಂಪತ್, ಮಡಿಕೇರಿ ಗ್ರಾಮಾಂತರ ವಿಭಾಗದ ಶಾಖಾಧಿಕಾರಿ ಹೇಮಂತ್ ರಾಜ್, ಭಾಗಮಂಡಲ ವಿಭಾಗದ ಶಾಖಾಧಿಕಾರಿ ತೇಜ ಎಂ. ಎಂ, ಸಂಪಾಜೆ ವಿಭಾಗಗಳ ಶಾಖಾಧಿಕಾರಿಗಳು ಮತ್ತು ಸಂತೋಷ್ ಕುಮಾರ್ ಇತರರು ಹಾಜರಿದ್ದರು.