ಮಡಿಕೇರಿ: ಮಹಾನ್ ವ್ಯಕ್ತಿಗಳ ಜಯಂತಿಯನ್ನು ಒಂದು ಜಾತಿ, ವರ್ಗಕ್ಕೆ ಸೀಮಿತವಾಗಿಟ್ಟು ಅವರು ಮಾಡಿದ ಸಾಧನೆಯನ್ನು ಕುಬ್ಜಗೊಳಿಸುವ ಪ್ರಯತ್ನಗಳಾಗಬಾರದು ಎಂದು ವಕೀಲ ಎಂ.ಎ.ನಿರಂಜನ್ ಕಿವಿಮಾತು ಹೇಳಿದ್ದಾರೆ.
ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಎಲ್ಲಾ ಗೌಡ ಸಮಾಜಗಳ ಸಹಕಾರದೊಂದಿಗೆ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾನ್ ವ್ಯಕ್ತಿಗಳ ಜಯಂತಿಗಳು ಒಂದು ಜಾತಿಗೆ ಸಿಮೀತವಾಗಬಾರದು, ಎಲ್ಲಾ ಜನಾಂಗದವರು, ಎಲ್ಲಾ ಧರ್ಮೀಯರು ಸೇರಿಕೊಂಡು ಜಿಲ್ಲಾಡಳಿತದ ಮೂಲಕ ನಡೆಯುವ ದೊಡ್ಡ ಕಾರ್ಯಕ್ರಮವಾಗಬೇಕು. ಆಗ ಮಾತ್ರ ಆ ವ್ಯಕ್ತಿಯನ್ನು ಸಮಾಜಕ್ಕೆ ಮಾದರಿ ಪ್ರತಿನಿಧಿಯನ್ನಾಗಿ ಪ್ರೇರೇಪಿಸಲು ಸಾಧ್ಯ ಎಂದರು.
ಯಾವುದೇ ಒಬ್ಬ ವ್ಯಕ್ತಿ ಒಂದು ಸಮುದಾಯದ ನಾಯಕನಾಗಿ ಕಾರ್ಯನಿರ್ವಹಿಸುವುದಿಲ್ಲ. ಅವರ ಕೆಲಸಗಳನ್ನು ನೋಡಿ ಸಮುದಾಯ ಅವರನ್ನು ನಾಯಕನನ್ನಾಗಿ ಮಾಡುತ್ತದೆ. ಈ ಸಾಲಿಗೆ ಕೆಂಪೇಗೌಡರು ಸೇರುತ್ತಾರೆ. ಇವರು ಎಲ್ಲಾ ಜಾತಿ, ಧರ್ಮದ ಜನರಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಜಾತಿ, ಜನಾಂಗ ಬಾಂಧವರು ಸೇರಿಕೊಂಡು ಇವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಗುಡ್ಡಗಾಡು ಪ್ರದೇಶವನ್ನು ನಗರವಾಗಿ ನಿರ್ಮಿಸುವ ಪರಿಕಲ್ಪನೆ ಹೊಂದಿದ್ದ ಕೆಂಪೇಗೌಡರು, ವೃತ್ತಿ, ವ್ಯವಹಾರಕ್ಕೆ ತಕ್ಕಂತೆ ವ್ಯವಸ್ಥಿತವಾಗಿ ನಗರವನ್ನು ನಿರ್ಮಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸಬೇಕು. ಪಠ್ಯ ಪುಸ್ತಕಗಳಲ್ಲಿ ಇವರ ಇತಿಹಾಸವನ್ನು ಅಳವಡಿಸಿದ್ದಲ್ಲಿ ಮಕ್ಕಳಿಗೆ ಕೆಂಪೇಗೌಡರ ಬಗ್ಗೆ ತಿಳಿದುಕೊಂಡಂತ್ತಾಗುತ್ತದೆ ಎಂದು ನಿರಂಜನ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, 16ನೇ ಶತಮಾನದಲ್ಲಿ ಜನಿಸಿದ ನಾಡಪ್ರಭು ಕೆಂಪೇಗೌಡರು ಯಲಹಂಕ ಪ್ರಾಂತ್ಯದ ರಾಜನಾಗಿ ಕಾರ್ಯನಿರ್ವಹಿಸಿದ್ದರು. ತನ್ನ ಜನತೆಗೆ ಒಂದು ರಾಜಧಾನಿಯ ಅಗತ್ಯತೆಯನ್ನು ಕಂಡು ಅತ್ಯಂತ ದುರ್ಗಮ ಅರಣ್ಯದಿಂದ ಕೂಡಿದ ಪ್ರದೇಶವನ್ನು ರಾಜಧಾನಿಯಾಗಿ ಆಯ್ಕೆ ಮಾಡಿಕೊಂಡರು. ನಂತರ ಶತಶತಮಾನಗಳ ದೂರದೃಷ್ಟಿ ಇರಿಸಿ ಎಲ್ಲಾ ಜನಾಂಗಗಳಿಗೆ ಪ್ರಾತಿನಿಧ್ಯ ನೀಡಿದರು ಎಂದರು.
ಅಭಿವೃದ್ಧಿಪರ ಚಿಂತನೆಯ ಮೂಲಕ ನಗರಗಳನ್ನು ನಿರ್ಮಿಸುವುದರೊಂದಿಗೆ ನೀರಾವರಿಗೂ ಆದ್ಯತೆ ನೀಡಿದ ಇವರ ಸಾಧನೆ ಶ್ಲಾಘನೀಯವೆಂದು ಕೊಂಡಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಪ್ರತಿಯೊಂದು ಜನಾಂಗಕ್ಕೂ ಸಮಾನ ಮಾನ್ಯತೆಯನ್ನು ನೀಡಿ ಎಲ್ಲರಿಗೂ ಸಹಕಾರಿಯಾಗವ ನಿಟ್ಟಿನಲ್ಲಿ ನೀರಾವರಿಗೆ ಆದ್ಯತೆ ನೀಡಿದ ಕೆಂಪೇಗೌಡರು, ಬೆಂಗಳೂರನ್ನು ಜಗದ್ವಿಖ್ಯಾತಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಒಕ್ಕಲಿಗರ ಹಿರಿಮೆಯನ್ನು ನಾಡಪ್ರಭು ಕೆಂಪೇಗೌಡರು ಎತ್ತಿ ಹಿಡಿದಿದ್ದಾರೆ. ಈ ಬಾರಿ ಸೋಮವಾರಪೇಟೆಯಲ್ಲಿ ಮಾತ್ರ ಜಿಲ್ಲಾಡಳಿತದಿಂದ ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲಾ ಗೌಡ ಸಮಾಜಗಳು ಸಹಕಾರ ನೀಡಬೇಕು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಗೌಡ ಸಮಾಜಗಳ ಅಧ್ಯಕ್ಷರು, ಸದಸ್ಯರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಪೊನ್ನಚ್ಚನ ಮೋಹನ್ ವಂದಿಸಿದರು. ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಭೆ ಗೌರವ ಅರ್ಪಿಸಿತು.