ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿಯ ನೂತನ ಕಚೇರಿಯನ್ನು ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ.ಪೂವಯ್ಯ ಉದ್ಘಾಟಿಸಿದರು.
ಈ ಸಂದರ್ಭ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ನಡೆದ ಆಚರಣಾ ಸಮಿತಿ ಸಭೆಯಲ್ಲಿ ಉಪಸಮಿತಿಗಳನ್ನು ರಚಿಸಲಾಯಿತು.
ಸ್ಮರಣ ಸಂಚಿಕೆ ಸಂಚಾಲಕರಾಗಿ ಚಂದ್ರಮೋಹನ್, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಗೋಪಾಲ್ ಸೋಮಯ್ಯ, ಕ್ರೀಡಾ ಸಮಿತಿ ಸಂಚಾಲಕರಾಗಿ ಸಂತೋಷ್ ರೈ, ಆಹಾರ ಸಮಿತಿ ಸಂಚಾಲಕರಾಗಿ ದಿವಾಕರ್, ಲಕ್ಕಿಡಿಪ್ ಸಂಚಾಲಕರಾಗಿ ನವೀನ್ ಡಿಸೋಜ, ಸ್ವಾಗತ ಸಮಿತಿ ಸಂಚಾಲಕರಾಗಿ ಎ.ಆರ್. ಕುಟ್ಟಪ್ಪ, ಪ್ರಚಾರ ಸಮಿತಿ ಸಂಚಾಲಕರಾಗಿ ಸುನಿಲ್ ಪೊನ್ನೆಟ್ಟಿ, ವೇದಿಕೆ ಸಮಿತಿ ಸಂಚಾಲಕರಾಗಿ ತೇಜಸ್ ಪಾಪಯ್ಯ, ರಕ್ಷಣಾ ಸಮಿತಿ ಸಂಚಾರಕರಾಗಿ ನವೀನ್ ಸುವರ್ಣ, ಆರೋಗ್ಯ ಸಮಿತಿ ಸಂಚಾಲಕರಾಗಿ ಅಬ್ದುಲ್ಲಾ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕರಾದ ಜಿ.ರಾಜೇಂದ್ರ, ನೂತನ ಸಮಿತಿಗಳ ಪದಾಧಿಕಾರಿಗಳು ದೊರೆತ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕು. ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಆರ್ಥಿಕ ಕ್ರೋಢೀಕರಣ ಕೂಡ ಮುಖ್ಯವಾಗಿದ್ದು, ಒಗ್ಗಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೆ ಕಾರ್ಯೋನ್ಮುಖರಾಗುವಂತೆ ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ ಪೂವಯ್ಯ, ಎಲ್ಲಾ ಸದಸ್ಯರು ಒಂದಾಗಿ ಮನೆ ಹಬ್ಬದಂತೆ ಬೆಳ್ಳಿ ಮಹೋತ್ಸವವನ್ನು ಆಚರಿಸುವಂತಾಗಬೇಕು. ಅರ್ಥಪೂರ್ಣ ಹಾಗೂ ವೈಶಿಷ್ಟಪೂರ್ಣ ಕಾರ್ಯಕ್ರಮಗಳೊಂದಿಗೆ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮ ಆಯೋಜಿಸಿದಲ್ಲಿ ಸಾರ್ಥಕತೆ ದೊರೆಯಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗುವಂತೆ ಕರೆ ನೀಡಿದರು.
ಜ.7 ರಂದು ಚಿತ್ರಕಲಾ ಸ್ಪರ್ಧೆ: ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಚಾಲನೆಯನ್ನು ಜ.7 ರಂದು ಲೊಗೋ ಬಿಡುಗಡೆ ಹಾಗೂ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ಚಾಲನೆ ನೀಡಲು ತೀರ್ಮಾನಿಸಲಾಯಿತು. ಪ್ರಾಥಮಿಕ, ಪ್ರೌಡಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕ್ಲಬ್ ಸದಸ್ಯರಿಗೆ ಚಿತ್ರಕಲೆ ಸ್ಪರ್ಧೆ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.