ಮಡಿಕೇರಿ, ಸೆ.13: ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ ಸಭೆಯು ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು. ಜಮ್ಮಾ ಹಿಡುವಳಿದಾರರಿಗೆ ಕೇಂದ್ರ ಸರಕಾರ ನೀಡಿರುವ ಶಸ್ತ್ರಾಸ್ತ್ರ ಪರವಾನಿಗೆ ರಿಯಾಯ್ತಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗೆ ಕಾನೂನು ರೀತಿಯ ಹೋರಾಟ ನಡೆಸಿ ಹಕ್ಕನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಅಧ್ಯಕ್ಷರಿಗೆ ಅಧಿಕಾರ ನೀಡಲಾಯಿತು.
ಪ್ರತಿ ಚುನಾವಣೆ ಸಂದರ್ಭದಲ್ಲಿ ಕೋವಿ ಪರವಾನಿಗೆ ಹೊಂದಿರುವವರು ತಮ್ಮ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವ ಆದೇಶವನ್ನು ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಉತ್ತರ ಬಾರದ ಕಾರಣ ಮತ್ತೆ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು.
2021-22ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಅ.8 ರಂದು ಶನಿವಾರಸಂತೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲಾಗುವುದು. 2022ರಲ್ಲಿ ನಡೆದ 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ರಾಷ್ಟç ಮಟ್ಟದಲ್ಲಿರುವ ಕೊಡಗಿನ ಕ್ರೀಡಾಪಟುಗಳನ್ನು ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ವಿಶೇಷ ಕೊಡುಗೆ ನೀಡಿರುವವರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ವಿ.ಪಿ.ಸುರೇಶ್, ಕೆ.ಪಿ.ನಾಗರಾಜ್, ಕೆ.ಪಿ.ರವಿ, ನಿರ್ದೇಶಕರುಗಳಾದ ಎನ್.ಕೆ.ಅಪ್ಪಸ್ವಾಮಿ, ಎಸ್.ಪಿ.ಪೊನ್ನಪ್ಪ, ಕೆ.ಆರ್.ಸತೀಶ್, ಕೆ.ರಮೇಶ್, ಹೆಚ್.ಎಂ.ಜಿತೇಂದ್ರ, ಎ.ಪಿ.ಧರ್ಮಪ್ಪ, ಟಿ.ಆರ್.ಪುರುಷೋತ್ತಮ, ಜಾನಕಿ ವೆಂಕಟೇಶ್, ಸವಿತ ಸತೀಶ್ ಹಾಗೂ ಗೌರವ ಕಾರ್ಯದರ್ಶಿ ಎಸ್.ಎಲ್.ಬಸವರಾಜು ಉಪಸ್ಥಿತರಿದ್ದರು.