ಮಡಿಕೇರಿ, ಜು.19: ಕುಂದಚೇರಿ (ಚೆಟ್ಟಿಮಾನಿ) ಗ್ರಾ.ಪಂ ವ್ಯಾಪ್ತಿಯ 2022-23ನೇ ಸಾಲಿನ ಟಾಸ್ಕ್ ಫೋರ್ಸ್ ಸಭೆ ಪಂಚಾಯಿತಿ ಅಧ್ಯಕ್ಷೆ ಸಿ.ಯು.ಸವಿತ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಚೆಟ್ಟಿಮಾನಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ ಸದಸ್ಯ ಪಿ.ಬಿ.ದಿನೇಶ್ ಮಾತನಾಡಿ ಮಹಾಮಳೆಯ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸದಸ್ಯ ಹ್ಯಾರಿಸ್ ಮಳೆಹಾನಿಯ ಕಷ್ಟ, ನಷ್ಟ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಅರಣ್ಯ ಇಲಾಖೆಯ ಮಂಜುನಾಥ್, ಪೊಲೀಸ್ ಅಧಿಕಾರಿ ಬೆಳ್ಯಪ್ಪ, ಕಂದಾಯ ಲೆಕ್ಕಿಗರಾದ ಶ್ರದ್ಧಾ, ಆರೋಗ್ಯ ಇಲಾಖೆಯ ಶ್ರೀನಾಥ್, ತಂಬಾಕು ನಿಯಂತ್ರಣ ಮಂಡಳಿಯ ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಆಶಾ ಕಾರ್ಯಕರ್ತರು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪಂಚಾಯಿತಿ ಉಪಾಧ್ಯಕ್ಷ ವಿಶು ಪ್ರವೀಣ್, ಸದಸ್ಯರುಗಳಾದ ಬಸಪ್ಪ, ಬೇಬಿ ಮತ್ತಿತರರು ಮಾತನಾಡಿದರು. ವಿವಿಧ ಸಂಘ, ಸಂಸ್ಥೆಯ ಪ್ರತಿನಿಧಿಗಳು ಸಲಹೆ ಸೂಚನೆ ನೀಡಿದರು.
ಆರೋಗ್ಯ ಇಲಾಖೆಯ ನಿರೀಕ್ಷಕ ಗುರುಪ್ರಸಾದ್, ಸಿಬ್ಬಂದಿಗಳಾದ ಪೂವಮ್ಮ ರೇಷ್ಮ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಯಾದವ್ ಸ್ವಾಗತಿಸಿದರು.