ಮಡಿಕೇರಿ: ವಿವಿಧ ವ್ಯವಹಾರಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ತೊಡಗಿಸಿಕೊಳ್ಳಲು ಇಚ್ಚಿಸುವ ಹಿಂದೂ ಸಮಾಜದ ಮಂದಿಯನ್ನು ಸಂಘಟಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಕಾರ್ಯಾಚರಿಸುತ್ತಿರುವ ಹಿಂದೂ ಎಕನಾಮಿಕ್ ಫೋರಂ ನ ಕೊಡಗು ಜಿಲ್ಲಾ ಘಟಕ ಉದ್ಘಾಟನೆಗೊಂಡಿದೆ.
ನಗರದ ಹೊರ ವಲಯದ ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಹಿಂದೂ ಎಕನಾಮಿಕ್ ಫೋರಂ ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಸ್ವಾಮಿ ವಿಜಯಾನಂದ ಕೊಡಗು ಘಟಕವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಹಿಂದೂ ಸಮಾಜದ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ಗಳು, ಹೂಡಿಕೆದಾರರು, ತಂತ್ರಜ್ಞರು, ವೃತ್ತಿಪರರು, ಅರ್ಥಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಹಾಗೂ ವ್ಯವಹಾರಿಕ ಚಿಂತನೆಯ ನಾಯಕರನ್ನು ಸ್ವಯಂ-ಸಂಘಟಿಸುವ ಕಾರ್ಯವನ್ನು ಹಿಂದೂ ಎಕನಾಮಿಕ್ ಫೋರಂ ಮಾಡುತ್ತಿದೆ. ವಿವಿಧ ದೇಶಗಳಲ್ಲಿ ವ್ಯವಹಾರ ಯಶಸ್ಸಿನ ದಿಕ್ಕಿನತ್ತ ಸಾಗಿದೆ ಎಂದರು.
100 ಮಂದಿ ವ್ಯವಹಾರಿಕವಾಗಿ ಲಾಭಹೊಂದಿ ಸಾವಿರ ಜನರಿಗೆ ಸಹಾಯ ಮಾಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಪ್ರತಿಯೊಂದು ಗುಂಪು ತಮ್ಮ ಜ್ಞಾನ, ಅನುಭವ, ಪರಿಣತಿ ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಬಹುದಾಗಿದೆ. ಪರಸ್ಪರ ಸಹಕಾರ ಮನೋಭಾವ ಬೆಳೆಯುತ್ತಿದೆ. ಉದಯೋನ್ಮುಖ ಹಿಂದೂ ಉದ್ಯಮಿಗಳಿಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ.
ಹಿಂದೂ ಆರ್ಥಿಕ ಶಕ್ತಿ ಮತ್ತೆ ಉತ್ತುಂಗದಲ್ಲಿ ಹೊರಹೊಮ್ಮುವ ಸಾಮಥ್ರ್ಯವನ್ನು ಹೊಂದಿದೆ. ಇದಕ್ಕೆ ಫೋರಂ ಪ್ರೇರಣೆ ನೀಡುತ್ತಿದೆ ಎಂದು ಸ್ವಾಮಿ ವಿಜಯಾನಂದ ತಿಳಿಸಿದರು.
ಅಮೆಜಾನ್ ವಿಭಾಗದ ಮುಖ್ಯಸ್ಥ ರಾಜೇಶ್ ಕೆ.ಪ್ರಸಾದ್ ಮಾತನಾಡಿ ಗುಣಮಟ್ಟವನ್ನು ಕಾಯ್ದುಕೊಂಡಲ್ಲಿ ವ್ಯವಹಾರ ಲಾಭದಾಯಕವಾಗಿರಲಿದೆ ಎಂದರು.
ಡಿಟಿಡಿಸಿಯ ರಾಷ್ಟ್ರೀಯ ಮುಖ್ಯಸ್ಥ ಅಶ್ವಿನಿ ಕುಮಾರ್ ಗುಪ್ತ ಮಾತನಾಡಿ ಇಂದು ಪ್ರತಿಯೊಂದು ವ್ಯವಹಾರವೂ ಕೊರಿಯರ್ ಸೇವೆಯ ಮೇಲೆ ಅವಲಂಬಿತವಾಗಿದ್ದು, ಡಿಟಿಡಿಸಿ ಅಗತ್ಯ ಸಹಕಾರ ನೀಡಲಿದೆ ಎಂದರು.
ಡಿಎಫ್ಆರ್ಎಲ್ ಹೆಚ್ಚುವರಿ ನಿರ್ದೇಶಕ ಆರ್.ಕುಮಾರ್ ಮಾತನಾಡಿ ಯುವ ಸಮೂಹ ವ್ಯವಹಾರಕ್ಕಾಗಿ ಹೊರ ದೇಶಗಳಿಗೆ ಹೋಗದೆ ಭಾರತದಲ್ಲೇ ಯಶಸ್ಸಿನ ಹೆಜ್ಜೆಗಳನ್ನಿಟ್ಟು ಅಭಿವೃದ್ಧಿ ಕಾಣುವಂತೆ ಕರೆ ನೀಡಿದರು.
ನೂತನ ಸಮಿತಿ
ಫೋರಂ ನ ಕೇಂದ್ರ ಸಮಿತಿಯ ಪ್ರಮುಖರಾದ ಛಾಯಾ ನಂಜಪ್ಪ ಅವರ ಉಪಸ್ಥಿತಿಯಲ್ಲಿ ಸ್ವಾಮಿ ವಿಜಯಾನಂದರು ಕೊಡಗು ಜಿಲ್ಲೆಯ ನೂತನ ಸಮಿತಿಯನ್ನು ಘೋಷಿಸಿದರು.
ಜಿಲ್ಲಾಧ್ಯಕ್ಷರಾಗಿ ಡಾ.ಶ್ಯಾಮ್ ಅಪ್ಪಣ್ಣ, ಉಪಾಧ್ಯಕ್ಷರಾಗಿ ಸುರೇಶ್ ಮುತ್ತಪ್ಪ, ಕಾರ್ಯದರ್ಶಿಯಾಗಿ ಅನೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿಯಾಗಿ ಸೋಮಣ್ಣ ಮಲ್ಲೇಂಗಡ, ಖಜಾಂಚಿಯಾಗಿ ರಾಜಪ್ಪ ಕುಪ್ಪಂಡ, ಆಡಳಿತ ಮಂಡಳಿ ಸದಸ್ಯರುಗಳಾಗಿ ಕಿಶೋರ್ ಬಿದ್ದಪ್ಪ, ಲಕ್ಷ್ಮಿ ರೆಡ್ಡಿ, ನಾಗೇಶ್, ನಾಜ್ ಚೆಂಗಪ್ಪ, ರಂಗಸ್ವಾಮಿ ಹಾಗೂ ಟಿ.ಕೆ.ಸುದೀರ್ ಕಾರ್ಯನಿರ್ವಹಿಸಲಿದ್ದಾರೆ.