ಮಡಿಕೇರಿ ಆ.5 : ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಜನವರಿಯಿಂದ ಇಲ್ಲಿಯವರೆಗೆ ದಾಖಲೆಯ 150 ಇಂಚಿಗೂ ಅಧಿಕ ಮಳೆಯಾಗಿದ್ದು, ಕಾಫಿ, ಕರಿಮೆಣಸು ಸಂಪೂರ್ಣವಾಗಿ ಕೊಳೆತು ಹೋಗಿದೆ. ತಕ್ಷಣ ನಷ್ಟದ ಸರ್ವೆ ನಡೆಸಿ ಸೂಕ್ತ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿ ಗಾಳಿಬೀಡು ಭಾಗದ ಬೆಳೆಗಾರರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲೆ ಅತ್ಯಧಿಕ ಮಳೆಯಾಗುವ ಗಾಳಿಬೀಡು ಗ್ರಾಮವನ್ನು ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಹಾಮಳೆಯಿಂದ ಬಹುತೇಕ ತೋಟಗಳ ಬೆಳೆ ನಾಶವಾಗಿದ್ದರೂ ಯಾವ ಅಧಿಕಾರಿಯೂ ತಿರುಗಿ ನೋಡಿಲ್ಲವೆಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದರು.
ಗಾಳಿಬೀಡು, ವಣಚಲು, ಮೊಣ್ಣಂಗೇರಿ, ಕಾಲೂರು, ಹಮ್ಮಿಯಾಲ ಹಾಗೂ ಮುಟ್ಲು ಗ್ರಾಮಗಳಲ್ಲಿನ ರೈತರು ಜೀವನಾಧಾರಕ್ಕಾಗಿ ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಭತ್ತ ಕೃಷಿಯನ್ನೇ ಅವಲಂಬಿಸಿದ್ದಾರೆ. ಮೇ ಹಾಗೂ ಜುಲೈ ತಿಂಗಳಿನಲ್ಲಿ ಭಾರೀ ಗಾಳಿಮಳೆಯಾಗಿದೆ, ಕೇವಲ 20 ದಿನಗಳಲ್ಲಿ ಸರಾಸರಿ 90 ಇಂಚಿಗಿಂತ ಹೆಚ್ಚು ಮಳೆ ಸುರಿದಿದೆೆ.
ಜನವರಿಯಿಂದ ಇಲ್ಲಿಯವರೆಗೆ ಗ್ರಾಮದಲ್ಲಿ ಸರಾಸರಿ 140 ಇಂಚು, ವಣಚಲು ಹಾಗೂ ಕಾಲೂರಿನಲ್ಲಿ 150 ಇಂಚಿಗಿಂತ ಹೆಚ್ಚು ಮಳೆಯಾಗಿದೆ. ಇದರ ಪರಿಣಾಮ ಕಾಫಿ ಗಿಡಗಳಲ್ಲಿದ್ದ ಶೇ.70 ರಿಂದ 80 ರಷ್ಟು ಕಾಫಿ ಕಾಯಿಗಳು ಕೊಳೆತು ನೆಲಕಚ್ಚಿವೆ, ಅಲ್ಲದೆ ಗಿಡಗಳು ದುರ್ಬಲಗೊಂಡಿವೆ. ಕರಿಮೆಣಸು ಫಸಲು ಸಂಪೂರ್ಣವಾಗಿ ನಾಶವಾಗಿದೆ. ಭಾರೀ ಗಾಳಿಗೆ ಮರಗಳು ಬಿದ್ದು ಹಲವು ತೋಟಗಳಿಗೆ ನಷ್ಟ ಉಂಟಾಗಿದೆ.
ಈ ಬೆಳೆಗಳನ್ನೇ ನಂಬಿ ಜೀವಿಸುತ್ತಿರುವ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ವರದಿ ತಯಾರಿಸಬೇಕು ಮತ್ತು ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಸಹಕಾರ ಸಂಘ ಮತ್ತಿತರ ಬ್ಯಾಂಕ್ ಗಳಲ್ಲಿ ರೈತರು ಪಡೆದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಗ್ರಾಮದ ಬೆಳೆಗಾರ ಹಾಗೂ ವಕೀಲ ಕೊಂಬಾರನ ರೋಶನ್ ಗಣಪತಿ ಒತ್ತಾಯಿಸಿದರು.
ಬೆಳೆಗಾರರಾದ ಕೊಂಬಾರನ ಗಣಪತಿ, ಕುಟ್ಟಮಣಿಯನ ಮಧು, ಯಾಲದಾಳು ನಿತಿನ್, ಕೊಂಬಾರನ ರಂಜಿತ್, ಯಾಲದಾಳು ಧನಂಜಯ, ಯಾಲದಾಳು ಮದನ್ ಹಾಗೂ ಉಡುದೋಳಿರ ಕುಶಾಲಪ್ಪ ಮನವಿ ನೀಡುವ ಸಂದರ್ಭ ಹಾಜರಿದ್ದರು.