News Karnataka Kannada
Monday, May 13 2024
ಮಡಿಕೇರಿ

ಮಡಿಕೇರಿ: ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅಧ್ಯಕ್ಷತೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ

Madikeri: Deputy Commissioner Dr. B.C. Satheesh presided over the programme.
Photo Credit :

ಮಡಿಕೇರಿ, ಡಿ.17: ಕೃಷಿಕರಿಗೆ ಆರ್‍ಟಿಸಿ ಒದಗಿಸುವುದು, ರಸ್ತೆ ದುರಸ್ತಿ, ವಿದ್ಯುತ್ ಸಮಸ್ಯೆ, ಕಾಡಾನೆ ಹಾವಳಿ, ವಸತಿ ರಹಿತರಿಗೆ ನಿವೇಶನ ಒದಗಿಸುವುದು ಹೀಗೆ ಹಲವು ಅಹವಾಲುಗಳ ಬಗ್ಗೆ ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ ಹೋಬಳಿಯ ತಿತಿಮತಿ ಗ್ರಾಮದ ಸಮುದಾಯ ಭವನದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ ‘ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಹೆಚ್ಚಾಗಿ ಕೇಳಿ ಬಂದವು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಬೆಳಕು ಚೆಲ್ಲಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಸರ್ಕಾರ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ’ ಎಂಬ ಹೆಸರಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ಥಳೀಯ ಹಲವು ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ವಾಸ್ತವ್ಯ ಸಹಕಾರಿ ಆಗಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ಹಂತ ಹಂತವಾಗಿ ಪ್ರಯತ್ನಿಸಲಾಗುವುದು ಎಂದರು.

ಸಭೆಯ ಆರಂಭದಲ್ಲಿ ಮಾತನಾಡಿದ ರೈತ ಮುಖಂಡರಾದ ಕಾರ್ಯಪ್ಪ ಅವರು ಈ ಭಾಗದ ರೈತರು ಮತ್ತು ಕಾರ್ಮಿಕರು ಪಶು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಪಶು ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದೆ ತೊಂದರೆ ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಡಾ.ಸುರೇಶ ಭಟ್ ಅವರು ಇಲಾಖೆಯಲ್ಲಿ ಭರ್ತಿಯಾಗದ ಬಾಕಿ ಹಾಗೆ ಉಳಿದಿರುವ ಹುದ್ದೆಗಳಿಂದಾಗಿ ಸಮಸ್ಯೆ ಎದುರಾಗಿದೆ. ಇರುವ ಅಧಿಕಾರಿ ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ . ಬಾಳಲೆ ಪಶು ಆಸ್ಪತ್ರೆಯ ಮಖ್ಯ ಪಶುವೈದ್ಯರನ್ನು ವಾರದಲ್ಲಿ ಬುಧವಾರ ಹಾಗೂ ಶುಕ್ರವಾರ ತಿತಿಮತಿ ಪಶು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ತಿತಿಮತಿಗೆ ವಿದ್ಯುತ್ ಗೋಣಿಕೊಪ್ಪದಿಂದ ಸರಬರಾಜು ಆಗುತ್ತಿದ್ದು ಗುಣಮಟ್ಟದ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಮುಂದಿನ ದಿನಗಳಲ್ಲು ಕಾಫಿ ತೋಟಕ್ಕೆ ನೀರು ಸಿಂಪಡಿಸಲು ಸಮಸ್ಯೆ ಉಂಟಾಗುತ್ತಿದೆ ಎಂದು ಕಾರ್ಯಪ್ಪ ಅವರು ಹೇಳಿದರು.
ಸೆಸ್ಕ್ ಅಧಿಕಾರಿ ಅವರು ಮಾತನಾಡಿ ಪೊನ್ನಂಪೇಟೆ ಎಕ್ಸ್‍ಪ್ರೆಸ್ ಲೈನ್ ಚಾಲ್ತಿಯಲ್ಲಿದ್ದು. ಬಾಳಲೆ ಸ್ಟೇಷನ್ ಅನುಮೋದನೆಯಾಗಿದೆ. ಎಂದು ಮಾಹಿತಿ ನೀಡಿದರು.

ತಿತಿಮತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಬ್ಬ ಲೈನ್ ಮೆನ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಾಗರಿಕರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಅಧಿಕಾರಿ ಅವರು ವಿರಾಜಪೇಟೆಗೆ 9 ಜನ ಮಂಜೂರಾತಿಯಾಗಿದ್ದು, ಅದರಲ್ಲಿ ಒಬ್ಬರು ಬಂದಿದ್ದಾರೆ ಅವರನ್ನು ತಿತಿಮತಿಗೆ ನೇಮಕ ಮಾಡಲಾಗಿದೆ ಎಂದರು
ತಿತಿಮತಿಯಿಂದ ಬಾಳೆಲೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ಕುರುಚಲು ಗಿಡಗಳು, ರಸ್ತೆಯ ಪಕ್ಕದಲ್ಲಿ ದಟ್ಟವಾಗಿ ಬೆಳೆದು ನಿಂತಿದೆ, ಇದರಿಂದ ಮುಂಭಾಗದಿಂದ ಬರುವ ವಾಹನಗಳ ಗುರುತು ಸಿಗದೆ ಇರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎಂದು ರೈತ ಮುಖಂಡರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ಇದಕ್ಕೆ ಪ್ರಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಂಚಾರಕ್ಕೆ ಅಡಚಣೆಯಾಗುತ್ತಿರುವ ರಸ್ತೆ ಬದಿಯಲ್ಲಿರುವ ಗಿಡಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.

ತಿತಿಮತಿ ಪಾಲಿಬೆಟ್ಟ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು ಅವರು ಈ ಸಾಲಿನಲ್ಲಿ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು. ಹಾಗೂ ಮಾರ್ಚ್ ನಂತರ ಅಂದಾಜು ಪಟ್ಟಿಯಲ್ಲಿ ಈ ಕಾಮಗಾರಿಗಳನ್ನು ಕೈಗೊಂಡು ರಸ್ತೆ ಡಾಮರೀಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಆನೆ ಹಾವಳಿ ನಿಯಂತ್ರಣಕ್ಕಾಗಿ ತಿತಿಮತಿಯಿಂದ ಜಂಗಲ್ ಹಾಡಿ ಆದಿವಾಸಿ ಹಾಡಿಗಳ ಪಕ್ಕದಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕೂಡಲೇ ಸಂಬಂಧಪಟ್ಟವರು ರೈತರ ಸಭೆಯನ್ನು ಕರೆದು ಆನೆ ಹಾವಳಿ ನಿಯಂತ್ರಿಸಲು ಕ್ರಮಕೈಗೊಳ್ಳಬೇಕು. ಹಾಗೂ ತಿತಿಮತಿಗೆ ತರಲಾದ ರೈಲ್ವೆ ಬ್ಯಾರಿಕೇಡ್‍ಗಳನ್ನು ಅರಣ್ಯ ಇಲಾಖೆಯವರು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ದಿಲೀಪ್ ಕುಮಾರ್ ಅವರು ಮಜ್ಜಿಗೆ ಹಳ್ಳದ ಹತ್ತಿರ ರೈಲ್ವೆ ಬ್ಯಾರಿಕೇಡ್ ಕಾರ್ಯ ನಡೆಯುತ್ತಿರುವುದರಿಂದ ಈ ಕಾರ್ಯಕ್ಕೆ ಇಲ್ಲಿಯ ಬ್ಯಾರಿಕೇಡ್‍ಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಮಾಹಿತಿ ನೀಡಿದರು.

ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಜಿಲ್ಲೆಗೂ ಟಾಸ್ಕ್ ಪೋರ್ಸ್ ಮಂಜೂರಾಗಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ತಿತಿಮತಿಯಲ್ಲಿ ನಾಲ್ಕು ಜನ ವಾಚರ್ಸ್‍ನ್ನು ನೇಮಕ ಮಾಡಲಾಗಿದ್ದು, ಯಾವುದೇ ಸಮಸ್ಯೆಗಳಿದ್ದರೆ ಟಾಸ್ಕ್‍ಪೋರ್ಸ್ ದೂರವಾಣಿ ಸಂಖ್ಯೆ 8277124444 ಗೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲಿ ಕೂಡಲೇ ಟಾಸ್ಕ್ ಪೋರ್ಸ್ ಅವರು ಬಂದು ಕ್ರಮಕೈಗೊಳ್ಳಲಿದ್ದಾರೆ.

ದೇವರಕಾಡು ಭದ್ರಕಾಳಿ ದೇವಸ್ಥಾನದವರೆಗಿನ ರಸ್ತೆ ಮಂಜೂರಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮಾಹಿತಿ ನೀಡಿದರು.

ಗ್ರಾಮಸ್ಥರಾದ ಶಿವಣ್ಣನವರು ಮಾತನಾಡಿ ಸರ್ವೆ ನಂಬರ್ 349/1 ರಲ್ಲಿ 17 ಎಕರೆ ಪೈಸಾರಿ ಜಾಗ ಅತಿಕ್ರಮಣಗೊಂಡಿದ್ದು, ಇದರ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಮಾಹಿತಿ ನೀಡಿದರು.
ತಿತಿಮತಿ ಗ್ರಾಮದ ವ್ಯಾಪ್ತಿಯಲ್ಲಿ 63/1 ರಲ್ಲಿ 1.73 ಎಕರೆ ಪೈಸಾರಿ ಜಾಗವಿದೆ. ಇದರ ಸರ್ವೇ ಮಾಡಿ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ತಿತಿಮತಿ ಗ್ರಾಮದ ನಾಗರಿಕರೊಬ್ಬರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಜಿಲ್ಲೆಯ ಪೈಸಾರಿ ಜಾಗವನ್ನು ಮೊದಲು ಸರ್ಕಾರಿ ಕಚೇರಿ ಕಟ್ಟಡ, ಅಂಗನವಾಡಿ, ಶಾಲೆ, ಸ್ಮಶಾನಕ್ಕೆ ಭೂಮಿ, ಹೀಗೆ ಹಲವು ಉದ್ದೇಶಗಳಿಗಾಗಿ ಪ್ರಥಮವಾಗಿ ಬಳಸಿಕೊಳ್ಳಲಾಗುವುದು. ನಂತರದಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಸತಿ ರಹಿತರಿಗೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಅರುಣ್ ಕುಮಾರ್ ಎಂಬವರು ನೋಕ್ಯ ಗ್ರಾಮ ವ್ಯಾಪ್ತಿಯಲ್ಲಿ ಟಾಟಾ ಕಂಪನಿಯವರು ಸರ್ವೇ ನಂಬರ್ 18 ರಲ್ಲಿ 1.76 ಎಕರೆ ಕೆರೆಯನ್ನು ಅತಿಕ್ರಮಿಸಿದ್ದು, ಸರ್ವೇ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು.

ಜಿಲ್ಲೆಯಲ್ಲಿ ಕೆರೆ ಹಾಗೂ ಸ್ಮಶಾನ ಜಾಗವನ್ನು ಯಾರೆ ಅತಿಕ್ರಮಣ ಮಾಡಿದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗೂ ಅತಿಕ್ರಮಿಸಿದ ಕೆರೆಯನ್ನು ತೆರವುಗೊಳಿಸಿ ಗ್ರಾ.ಪಂ.ಗೆ ಸುಪರ್ದಿಗೆ ನೀಡಲಾಗುವುದು. ಜಿಲ್ಲೆಯಲ್ಲಿ ನೋಕ್ಯ ಗ್ರಾಮ ಹೊರತು ಪಡಿಸಿ ಉಳಿದ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ರಾಮಕೃಷ್ಣ ಅವರು ಮಾತನಾಡಿ ತಿತಿಮತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ನಡೆಸಬೇಕು ಎಂದು ಮನವಿ ಮಾಡಿದರು.

ಗ್ರಾ.ಪಂ. ಅಧ್ಯಕ್ಷರಾದ ಸರಸ್ವತಿ ಅವರು ಮಾತನಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಹನಗಳು ತುಂಬಾ ವೇಗವಾಗಿ ಹಾದು ಹೋಗುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಹಂಪ್‍ಗಳನ್ನು ನಿರ್ಮಿಸಬೇಕು. ಹಾಗೂ ಸಿಸಿಟಿವಿಗಳನ್ನು ಅಳವಡಿಸಬೇಕು. ಮತ್ತು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ರಸ್ತೆಯ ಅಲ್ಲಲ್ಲಿ ಜಿಬ್ರಾ ಕ್ರಾಸ್, ಶಾಲಾ ವಲಯಗಳ ರಸ್ತೆಯ ಬದಿಯಲ್ಲಿ ಸೂಚನಾ ಫಲಕ ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಗ್ರಾಮದಿಂದ ಶಾಲಾ-ಕಾಲೇಜುಗಳಿಗೆ ಹೋಗುವವರು ಬಸ್‍ಗೆ ಕಾಯುತ್ತಿದ್ದರು ಬಸ್ ನಿಲ್ಲಿಸದೇ ಒಮ್ಮೊಮ್ಮೆ ಮಕ್ಕಳು ಶಾಲೆಗೆ ಹೋಗದೆ ಮನೆಗೆ ವಾಪಸ್ಸು ಬರುತ್ತಿದ್ದಾರೆ. ಮೈಸೂರು ಕಡೆಯಿಂದ ಬರುವ ಬಸ್‍ಗಳು ತಿತಿಮತಿ ಚೈನ್‍ಗೇಟ್, ಪೊಲೀಸ್ ಸ್ಟೇಷನ್, ತಿತಿಮತಿ ಟೌನ್ ಹತ್ತಿರ ಬಸ್‍ಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.

ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ ಅವರು ಮಾತನಾಡಿ ಮೈಸೂರು ಕಡೆಯಿಂದ ಬರುವ ಬಸ್‍ಗಳು ಎಕ್ಸ್‍ಪ್ರೆಸ್ ಬಸ್‍ಗಳಾಗಿರುವುದರಿಂದ ಒಂದೇ ಗ್ರಾಮದಲ್ಲಿ ಮೂರು ಕಡೆ ಬಸ್‍ನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಇದರ ಬಗ್ಗೆ ಮೈಸೂರು ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಾಮಾಜಿಕ ಭದ್ರತೆ ಯೋಜನೆಯಡಿ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರ್, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಪಿಡಿಒ, ಗ್ರಾಮಸ್ಥರು ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು