ಬಂಟ್ವಾಳ: ತಾಲೂಕಿನ ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ದುರುಪಯೋಗವಾಗಿದ್ದು, ಎಂಟು ವಾರದೊಳಗೆ ಇದರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಚನ್ಯಾಯಾಲಯ ಮಂಗಳೂರು ವಿಭಾಗದ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಹಾಯಕ ಉಪನಿಬಂಧಕರು ಅವರಿಗೆ ನಿರ್ದೇಶಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಸಂಘದ ಸದಸ್ಯ ಕಾವಳಮೂಡೂರು ನಿವಾಸಿ ವಿಜಯಪ್ರಭು ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಈ ಹಗರಣದಲ್ಲಿ ಸಂಘದ ಆಡಳಿತ ಮಂಡಳಿ ,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಕೇಶವ ಹಾಗೂ ಕೆಲ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಂಘದಲ್ಲಿ ನಡೆದ ಕೋಟ್ಯಾಂತರ ರೂ.ಹಣ ದುರುಪಯೋಗದ ಬಗ್ಗೆ 2021 ಸೆ.24 ರಂದು ಮಂಗಳೂರು ಸಹಕಾರ ಸಂಘಗಳ ಉಪನಿಭಂದಕರು,ಸಹಾಯಕ ನಿಬಂಧಕರು ಹಾಗೂ ಬೆಂಗಳೂರು ಕೇಂದ್ರ ಸಹಕಾರಿ ಸಂಘದ ನಿಬಂಧಕರಿಗೆ ಲಿಖಿತ ದೂರು ನೀಡಲಾಗಿತ್ತು.ಆದರೆ ಇವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ವಿವರಿಸಿದರು.
ಈ ಹಿನ್ನಲೆಯಲ್ಲಿ ತಾನು ಸಹಿತ ಆರು ಮಂದಿ ಸದಸ್ಯರು ಹೈಕೋರ್ಟಿನಲ್ಲಿ ದಾವೆ ಹೂಡಿದ್ದು, ಇದರ ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯ ಎಂಟು ವಾರದೊಳಗೆ ಇದರ ತನಿಖೆ ನಡೆಸಿ ಕ್ರಮ ಜರಗಿಸುವಂತೆ ಆದೇಶಿಸಿ ಈ ದಾವೆಯನ್ನು ಮುಕ್ತಾಯಗೊಳಿಸಿದೆ ಎಂದು ವಿಜಯ ಪ್ರಭು ತಿಳಿಸಿದರು.
ಸಂಘದ ಸದಸ್ಯರ ಹೆಸರಿನಲ್ಲಿ ಇನ್ಯಾರೋ ಅಕ್ರಮವಾಗಿ ಸಾಲ ಪಡೆದಿದ್ದು,ಸದಸ್ಯರು ಈ ಹಿಂದಿನ ತಮ್ಮ ಸಾಲ ಮರುಪಾವತಿಗೆ ಸಂಘದ ಕಚೇರಿಗೆ ಹೋದಾಗ ದುಪ್ಪಟ್ಟು ಸಾಲದ ಹಣ ಬಾಕಿರುವ ವಿಚಾರ ಬೆಳಕಿಗೆ ಬಂದಿದೆ.ಈ ಅಕ್ರಮದಿಂದ ಸಾಲಗಾರರು ಕಂಗಾಲಾಗಿದ್ದಾರೆ ಎಂದು ಅವರು ಅಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ ಪೂಜಾರಿ,ಜಯಶೀಲ,ವೆಂಕಟ್ರಮಣ ಮುಚ್ಚಿನ್ನಾಯ,ವಾಸುದೇವ ಆಚಾರ್ಯ,ಪದ್ಮನಾಭ ಮಯ್ಯ ಮೊದಲಾದವರಿದ್ದರು.