ಮಡಿಕೇರಿ : ಸೋಮವಾರಪೇಟೆ ತಾಲ್ಲೂಕು ಮಾದ್ರೆ ಗ್ರಾಮದ ದಂಡಳ್ಳಿಯಲ್ಲಿ ಪರಿಶಿಷ್ಟರಿಗಾಗಿ ಮೀಸಲಿಟ್ಟಿರುವ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ತಕ್ಷಣ ತೆರವುಗೊಳಿಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ನಿವೇಶನ ರಹಿತರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತುವರಿ ತೆರವಿಗೆ 15 ದಿನಗಳ ಗಡುವು ನೀಡಿತು. ತಪ್ಪಿದಲ್ಲಿ ಪರಿಶಿಷ್ಟರಿಗಾಗಿ ಮೀಸಲಿಟ್ಟಿರುವ ಭೂಮಿಯಲ್ಲಿ ಅರ್ಹ ಫಲಾನುಭವಿಗಳು ಗುಡಿಸಲು ನಿರ್ಮಿಸಿಕೊಳ್ಳಲಿದ್ದಾರೆ ಎಂದು ಪ್ರಮುಖರು ಎಚ್ಚರಿಕೆ ನೀಡಿದರು.
ಎಂ.ಎಸ್.ವಿರೇಂದ್ರ ಮಾತನಾಡಿ ಮಾದ್ರೆ ಗ್ರಾಮದಲ್ಲಿ ತಲೆತಲಾಂತರಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ವಾಸವಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಜಾಗವಿಲ್ಲದೆ ಪರದಾಡುವಂತಾಗಿದೆ ಎಂದರು.
ಸುಮಾರು 2 ವರ್ಷಗಳ ಹಿಂದೆ ಸೋಮವಾರಪೇಟೆಯ ಸಮಾಜ ಕಲ್ಯಾಣಾಧಿಕಾರಿಗಳ ಮೂಲಕ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮಾದ್ರೆ ಗ್ರಾಮದ ದಂಡಳ್ಳಿಯ ಪೈಸಾರಿ ಜಾಗದಲ್ಲಿ ಮನೆ ನಿರ್ಮಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ತಶೀಲ್ದಾರರು ಅರ್ಜಿ ಪರಿಶೀಲಿಸಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಾಣಾಧಿಕಾರಿಗಳಿಗೆ 30 ಏಕರೆ ಜಾಗ ಗುರುತಿಸಿ ಕಾಯ್ದಿರಿಸುವಂತೆ ಸೂಚಿಸಿದ್ದರು.
ಕೊಡ್ಲಿಪೇಟೆ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಸರ್ವೆ ಇಲಾಖೆಯವರು ಜಾಗದ ಸರ್ವೆ ಮಾಡಿ ಆಕಾರ್ ಬಂದಿ, ಜಮಾಬಂದಿ ಸಿದ್ಧ ಮಾಡಿ ಜಾಗ ಒತ್ತುವರಿ ಮಾಡಿಕೊಂಡವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಹಣಬಲ ಮತ್ತು ರಾಜಕೀಯ ಬಲ ಉಳ್ಳವರು ಮತ್ತೆ ಆ ಜಾಗದಲ್ಲಿ ಕಾಫಿ, ಏಲಕ್ಕಿ, ಬಾಳೆ ಗಿಡಗಳನ್ನು ನೆಟ್ಟು ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಜಿಲ್ಲಾಡಳಿತ ತಕ್ಷಣ ಒತ್ತುವರಿ ಜಾಗ ತೆರವುಗೊಳಿಸಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಅದೇ ಜಾಗದಲ್ಲಿ ನಿರಾಶ್ರಿತ ಕುಟುಂಬಗಳು ಗುಡಿಸಲು ಕಟ್ಟಿ ವಾಸ ಮಾಡಲಿವೆ ಎಂದು ವೀರೇಂದ್ರ ಎಚ್ಚರಿಕೆ ನೀಡಿದರು.
ಸಮಿತಿಯ ಜಿಲ್ಲಾ ಖಜಾಂಚಿ ಡಿ.ಎಸ್.ಕಾಂತರಾಜು, ಶನಿವಾರಸಂತೆ ಕಾರ್ಯಾಧ್ಯಕ್ಷ ಜಗದೀಶ್ ಕಿತ್ತೂರು, ಹೋಬಳಿ ಅಧ್ಯಕ್ಷ ಶಿವಲಿಂಗ, ಹಿರಿಯ ಮುಖಂಡ ಎಂ.ಸಿ.ಹೂವಣ್ಣ, ಮಾದ್ರೆ ಜೈ ಭೀಮ್ ಯುವಕ ಸಂಘದ ಅಧ್ಯಕ್ಷ ಎಂ.ಕೆ.ಮಂಜುನಾಥ್, ಪ್ರಮುಖರಾದ ರಾಣಿ ಮತ್ತಿತತರು ಹಾಜರಿದ್ದರು.