ಮಡಿಕೇರಿ : ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕೊಡಗಿನ ಅಧ್ಯಕ್ಷರು ಹಾಗೂ ಮಡಿಕೇರಿಯಲ್ಲಿ ವಕೀಲರಾಗಿರುವ ಕೃಷ್ಣಮೂರ್ತಿ, ತಾವು ತಮ್ಮ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕುಶಾಲನಗರದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ತಮ್ಮ ಸಹಚರನನ್ನು ರಾತ್ರಿ ಪೊನ್ನತ್ಮೊಟ್ಟೆಯಲ್ಲಿ, ಬಿಟ್ಟು ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದಾಗ, ಅಬ್ಯಾಲದ ಬಳಿ ದುಷ್ಖರ್ಮಿಗಳು ಕಾರಿಗೆ ಗುಂಡು ಹಾರಿಸಿ ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ದೂರನ್ನು ಆದರಿಸಿ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದು, ತಿಂಗಳು ಕಳೆಯುತಿದ್ದು, ಇದರ ಬಗ್ಗೆ ಯಾವುದೇ ಸುಳಿವು ದೊರೆತಂತೆ ಕಾಣುತಿಲ್ಲ. ಜಿಲ್ಲೆಯ ಎಲ್ಲಾ ವಕೀಲರ ಸಂಘಗಳು ಕೂಡ ಪ್ರತಿಭಟನೆ ನಡೆಸಿದ್ದರು. ಮಡಿಕೇರಿಯಲ್ಲಿ ಕಲಾಪವನ್ನು ಬಹಿಷ್ಕರಿಸಿ ವಕೀಲರು ಪ್ರತಿಭಟನೆ ನಡೆಸಿದರು. ಇಷ್ಟೆಲ್ಲ ಆದರೂ ಇನ್ನೂ ಕೂಡ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ವಿಫಲರಾದಂತೆ ಕಾಣುತ್ತಿದೆ.
ಪ್ರಕರಣದ ಬಗ್ಗೆ ಈಗಾಗಲೇ ಸಾರ್ವಜನಿಕರು ಹಾಗು ಹಲವು ವಲಯಗಳಲ್ಲಿ ಗುಸು ಗುಸು ಗಾಳಿ ಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಆದುದರಿಂದ ಈ ಪ್ರಕರಣವನ್ನು ಆದಷ್ಟು ಬೇಗ ಭೇದಿಸಿ ಆರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಬೇಕೆಂದು, ಗ್ರಾಮದ ಹೆಸರನ್ನು ಜಿಲ್ಲಾಮಟ್ಟದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ ಹಾಳು ಮಾಡುತ್ತಿರುವ ಇಂತಹ ಕಿಡಿಗೇಡಿಗಳನ್ನು ಆದಷ್ಟು ಶೀಘ್ರ ಬಂಧಿಸಬೇಕೆಂದು ಗ್ರಾಮಸ್ಥರು ಹಾಗು ಸಾರ್ವಜನಿಕರು ಆಗ್ರಹಿಸಿದ್ದಾರೆ.