ಮಡಿಕೇರಿ: ಮಡಿಕೇರಿ ನಗರದಲ್ಲಿರುವ ಬ್ಯಾಂಕ್ ಆಫ್ ಬರೋಡದ ಜಿ.ಟಿ ರಸ್ತೆ ಶಾಖೆಯನ್ನು ಮುಖ್ಯ ಶಾಖೆಗೆ ವಿಲೀನಗೊಳಿಸಬಾರದೆಂದು ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಪಿ.ರಾಜೀವ ಲೋಚನ ಒತ್ತಾಯಿಸಿದ್ದಾರೆ.
ಬ್ಯಾಂಕ್ ಆಫ್ ಬರೋಡದ ವಲಯ ಕಚೇರಿಯ ಮಂಗಳೂರು ವಲಯ ವ್ಯವಸ್ಥಾಪಕರು ಹಾಗೂ ಮಡಿಕೇರಿಯ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿರುವ ಅವರು, ಗ್ರಾಹಕರ ಹಿತದೃಷ್ಟಿಯಿಂದ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ನಾವುಗಳು ಕಳೆದ ಹಲವು ವರ್ಷಗಳಿಂದ ಬ್ಯಾಂಕ್ ಆಫ್ ಬರೋಡದ ಗ್ರಾಹಕರಾಗಿದ್ದು, ಇಲ್ಲಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ಹಲವು ಗ್ರಾಹಕರ ಅನುಕೂಲಕ್ಕಾಗಿ ಮತ್ತು ಹಿರಿಯ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಿರಲಿ ಎಂದು ಜಿ.ಟಿ ರಸ್ತೆಯಲ್ಲಿ ಮತ್ತೊಂದು ಶಾಖೆಯನ್ನು ತೆರೆಯಲಾಯಿತು. ಈ ಶಾಖೆಯು ಇಲ್ಲಿಯವರೆಗೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಗುತ್ತಿಗೆದಾರರು ಸೇರಿದಂತೆ ಹೆಚ್ಚಿನ ಗ್ರಾಹಕರು ಖಾತೆ ಹೊಂದಿದ್ದಾರೆ. ಬ್ಯಾಂಕ್ ಆವರಣದಲ್ಲಿ ಸಾಕಷ್ಟು ವಾಹನಗಳನ್ನು ನಿಲುಗಡೆಗೊಳಿಸಲು ಸ್ಥಳಾವಕಾಶವಿದೆ.
ಆದರೆ ನಗರದ ಹೃದಯ ಭಾಗದಲ್ಲಿರುವ ಮುಖ್ಯ ಶಾಖೆ ಮುಖ್ಯ ರಸ್ತೆಯ ಪಕ್ಕದಲ್ಲೇ ಇದ್ದು, ವಾಹನಗಳ ನಿಲುಗಡೆ ಅಸಾಧ್ಯವಾಗಿದೆ. ಹಿರಿಯ ನಾಗರೀಕರಿಗೆ ಬ್ಯಾಂಕ್ ಗೆ ಬಂದು ಹೋಗುವುದು ಕಷ್ಟಸಾಧ್ಯವಾಗಲಿದೆ. ಎರಡು ಶಾಖೆ ವಿಲೀನವಾಗುವುದರಿಂದ ಕಾರ್ಯದ ಒತ್ತಡ ಹೆಚ್ಚಾಗಿ ಗ್ರಾಹಕರಿಗೆ ಉತ್ತಮ ಸೇವೆ ಲಭಿಸುವುದು ಅಸಾಧ್ಯವಾಗಿದೆ. ಅಲ್ಲದೆ ದಿನ ಪೂರ್ತಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಬಹುದು ಎಂದು ರಾಜೀವ ಲೋಚನ ಗಮನ ಸೆಳೆದಿದ್ದಾರೆ.
ಈ ಎಲ್ಲಾ ಅಡಚಣೆಗಳನ್ನು ಪರಿಗಣಿಸಿ ಗ್ರಾಹಕರ ಹಿತದೃಷ್ಟಿಯಿಂದ ಜಿ.ಟಿ. ರಸ್ತೆಯ ಶಾಖೆಯನ್ನು ವಿಲೀನಗೊಳಿಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.