ವಿರಾಜಪೇಟೆ: ವರ್ಷಪೂರ್ತಿ ಶ್ರಮವಹಿಸಿ ದುಡಿದು ಇನ್ನೇನು ಧಾನ್ಯ ಲಕ್ಷ್ಮಿ ಯನ್ನು ಮನೆ ತುಂಬಿಕೊಂಡು ಸಂಭ್ರಮಿಸಬೇಕಿದ್ದ ರೈತ ಆನೆದಾಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿಯಂತೆ ಪರಿತಪಿಸುವಂತ ಘಟನೆ ಮಗ್ಗುಲ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಪ್ರಗತಿಪರ ರೈತ ಪುಲಿಯಂಡ ಜಗದೀಶ್ ರವರು ಕಳೆದ ಒಂದುವಾರದಿಂದ ಕಟಾವು ಮಾಡಿ ಸ್ವಚಗೊಳಿಸಿ ಸಿದ್ದಪಡಿಸಿ ಮನೆಗೆ ಸಾಗಿಸಲು ಮೂಟೆಗಳಲ್ಲಿ ತುಂಬಿಸಿ ಕಣದಲ್ಲಿಟ್ಟಿದ ಭತ್ತದ ಮೂಟೆಗಳನ್ನು ತಡರಾತ್ರಿಯಲ್ಲಿ ಬಂದ ಗಜಪಡೆಗಳು ತೊಯ್ದಾಡಿ ನಾಶ ಪಡಿಸಿ ಅನ್ನಧಾತನ ವರ್ಷದ ಕೂಳಿಗೆ ಕಂಟಕ ತಂದಿವೆ.
ಭತ್ತದ ಬೆಳೆ ಪ್ರಯಾಸದ ಕೃಷಿ ಎಂಬ ಅರಿವಿದ್ದರೂ ನಮ್ಮ ಸಾಂಪ್ರದಾಯಿಕ ಬೆಳೆ ಎಂಬ ಭಾವನೆಯಿಂದ ಹೆಚ್ಚಿನ ಮಹತ್ವ ನೀಡಿ ಭತ್ತ ಕೃಷಿ ಮಾಡಿದ್ದು ಈಗ ಸುಮಾರು ಇಪ್ಪತ್ತು ಕ್ವಿಂಟಾಲ್ ನಷ್ಟು ಸಿದ್ದಪಡಿಸಿದ ಭತ್ತದ ಮೇಲೆ ಆನೆಗಳು ಧಾಳಿಮಾಡಿ ನಾಶಪಡಿಸಿದ್ದು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ ಎಂಬ ನಾಣ್ಣುಡಿಯಂತೆ ರೃತರ ಬದುಕು ಆಗಿದೆ ಎಂದು ಪುಲಿಯಂಡ ಜಗದೀಶ್ ಬೇಸರ ವ್ಯಕ್ತಪಡಿಸಿದ್ದಾರೆ.ಕೊಡಗಿನ ಆನೆ ಮತ್ತು ಮಾನವ ಸಂಘರ್ಷಗಳ ಬಗ್ಗೆ ವಿಧಾನ ಸೌಧದ ವರೆಗೆ ಚರ್ಚೆಗಳು ಆಗತ್ತವೆಯೇ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.