ಮಡಿಕೇರಿ, ಸೆ.24: ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಬೇಂಗ್ನಾಡು ಕೊಡವ ಸಮಾಜದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಾಚರಣಿಯಂಡ ಪಿ.ಸುಮನ್ ಸಂಘವು ಪ್ರಸಕ್ತ ಸಾಲಿನಲ್ಲಿ ರೂ.20,71,085 ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.11.5 ಡಿವಿಡೆಂಟ್ ಹಂಚಿಕೆ ಮಾಡಲಾಯಿತು. ಇದರಲ್ಲಿ ಶೇ.3.5 ಡಿವಿಡೆಂಟ್ ಅನ್ನು ಸಂಘದ ಕಚೇರಿಯ ಪೀಠೋಪಕರಣ ಖರೀದಿಸಲು ಸದಸ್ಯರು ಸಂಘಕ್ಕೆ ನೀಡಿರುವುದಾಗಿ ತಿಳಿಸಿದರು.
2021-22ನೇ ಸಾಲಿನಲ್ಲಿ ರೂ.8 ಕೋಟಿ 49 ಲಕ್ಷ ಕೆ.ಸಿ.ಸಿ.ಫಸಲು ಸಾಲವನ್ನು ವಿತರಣೆ ಮಾಡಿದ್ದು, ಇದರಲ್ಲಿ ರೂ.2 ಕೋಟಿ 46 ಲಕ್ಷದಷ್ಟು ಸಾಲವನ್ನು ಸ್ವಂತ ಬಂಡವಾಳದಿಂದ ನೀಡಲಾಗಿದೆ. ಅದೇ ರೀತಿ ಸಂಘದಲ್ಲಿ ಚಿನ್ನಾಭರಣ ಸಾಲ, ಗೊಬ್ಬರ ಸಾಲ, ಪಿಗ್ಮಿ ಸಾಲ, ಮಧ್ಯಮಾವಧಿ ಸಾಲ, ವಾಹನ ಸಾಲಗಳನ್ನು ಸದಸ್ಯರಿಗೆ ವಿತರಣೆ ಮಾಡುತ್ತಿರುವುದಾಗಿ ಹೇಳಿದರು. ಸಂಘದಲ್ಲಿ ವಿವಿಧ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಪ್ರಸಕ್ತ ಸಾಲಿನ ಅಂತ್ಯಕ್ಕೆ ಒಟ್ಟು 4.56 ಕೋಟಿ ಠೇವಣಿಯನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಆತ್ಮನಿರ್ಭರ್ ಯೋಜನೆಯಡಿ ನಬಾರ್ಡ್ನ ಮತ್ತು ಕೆ.ಡಿ.ಸಿ.ಸಿ. ಬ್ಯಾಂಕಿನ ಸಹಯೋಗದಲ್ಲಿ ರೂ.82.11 ಲಕ್ಷ ವೆಚ್ಚದಲ್ಲಿ ಸಂಘದ ಗೋದಾಮು, ಕಟ್ಟಡದ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದ್ದು, ಮುಂದಿನ ಮೂರು ತಿಂಗಳಿನೊಳಗೆ ನೂತನ ಕಟ್ಟಡ ಉದ್ಘಾಟನೆ ಮಾಡಿ ಸಂಘದ ಕಾರ್ಯಚಟುವಟಿಕೆ ನಡೆಸುವುದಾಗಿ ತಿಳಿಸಿದರು.
ಸಭಾಭವನ ನಿರ್ಮಾಣಕ್ಕೆ ಸಂಘಕ್ಕೆ 3 ಲಕ್ಷ ರೂ. ಅನುದಾನ ನೀಡಿದ ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಇದೇ ಸಂದರ್ಭ ಸುಮನ್ ಧನ್ಯವಾದ ಸಲ್ಲಿಸಿದರು.
ಸಭೆಯಲ್ಲಿ 2020-21ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಅಂಗೀಕರಿಸಲಾಯಿತು. ಅಲ್ಲದೆ ಲೆಕ್ಕ ಪರಿಶೋಧನಾ ವರದಿಯನ್ನು ಮಂಜೂರು ಮಾಡಲಾಯಿತು. ಕಳೆದ ವಾರ್ಷಿಕ ಮಹಾಸಭೆಯ ವರದಿ ಓದಿ ರೆಕಾರ್ಡ್ ಮಾಡಲಾಯಿತು.
ನಂತರ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೃತಪಟ್ಟ ಸಂಘದ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಕೆ.ಡಿ.ಸಿ.ಸಿ ಬ್ಯಾಂಕಿನ ಪ್ರತಿನಿಧಿಗಳು, ಸಂಘದ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪಿ.ಟಿ.ಶ್ರೀನಿವಾಸ್ ಸ್ವಾಗತಿಸಿ, ನಿರ್ದೇಶಕ ಕೆ.ವಿ.ಕಿಶೋರ್ ಕುಮಾರ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು.