ಮಡಿಕೇರಿ, ಸೆ.9: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ರಾಜ್ಯ ಸರ್ಕಾರ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಪ್ರಮುಖ ಡಾ.ಮಂತರ್ ಗೌಡ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಲೆ ಏರಿಕೆ ಮತ್ತು ಜಿಎಸ್ಟಿ ಹೊರೆಯ ನಡುವೆ ಹಬ್ಬಗಳನ್ನು ಆಚರಿಸಬೇಕಾದ ದುಸ್ಥಿತಿ ಬಂದೊದಗಿದ್ದು, ಪ್ರಸ್ತುತ ಬಿಡುಗಡೆ ಮಾಡಿರುವ ರೂ.1 ಕೋಟಿ ಅತ್ಯಂತ ಅಲ್ಪ ಮೊತ್ತವಾಗಿದೆ ಎಂದು ಟೀಕಿಸಿದ್ದಾರೆ.
ಪ್ರವಾಸೋದ್ಯಮದ ಮೂಲಕ ಗಮನ ಸೆಳೆದು ಅನೇಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿರುವ ಮಡಿಕೇರಿ ನಗರಕ್ಕೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಐತಿಹಾಸಿಕ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮತ್ತಷ್ಟು ಅನುದಾನದ ಅಗತ್ಯವಿದೆ. ಆರ್ಥಿಕ ಹೊಡೆತದಿಂದ ಜನರು ಕೂಡ ಕಷ್ಟದಲ್ಲಿರುವುದರಿಂದ ದಸರಾ ಸಮಿತಿಗಳು ಸಾರ್ವಜನಿಕವಾಗಿ ಹಣ ಸಂಗ್ರಹಿಸಿ ದಸರಾ ಹಬ್ಬ ಆಚರಿಸಲು ಅಸಾಧ್ಯವಾಗಿದ್ದು, ಸರ್ಕಾರವೇ ದಸರಾ ಸಮಿತಿಗಳಿಗೆ ಹಣ ನೀಡಬೇಕಾಗಿದೆ.
ಕಳೆದ ಕೆಲವು ವರ್ಷಗಳಿಂದ ಅತಿವೃಷ್ಟಿ ಮತ್ತು ಕೋವಿಡ್ ಕಾರಣದಿಂದ ಮಡಿಕೇರಿ ದಸರಾವನ್ನು ಸೀಮಿತ ವೆಚ್ಚದಲ್ಲಿ ನಡೆಸಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಸುಧಾರಿಸಿದ್ದು, ಜನ ಅದ್ಧೂರಿ ದಸರಾ ಆಚರಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಶಾಸಕರು ಈ ಬಗ್ಗೆ ಕಾಳಜಿ ವಹಿಸಿ ಹೆಚ್ಚುವರಿ ಒಂದು ಕೋಟಿ ರೂ. ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಿ ಒಟ್ಟು 2 ಕೋಟಿ ದೊರೆಯುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದಸರಾ ಆಚರಣೆಗಾಗಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾವನ್ನು ದಸರಾಕ್ಕಷ್ಟೇ ಖರ್ಚು ಮಾಡಬೇಕು ಹೊರತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಾರದು. ರಸ್ತೆ, ಚರಂಡಿ, ತಡೆಗೋಡೆ, ಕಾಂಕ್ರೀಟ್ ಗ್ಯಾಲರಿ ನಿರ್ಮಾಣಕ್ಕೆ ನಗರಸಭೆಯಲ್ಲಿ ಪ್ರತ್ಯೇಕ ಅನುದಾನ ಇರುವುದರಿಂದ ದಸರಾ ಅನುದಾನವನ್ನು ಬಳಸುವುದು ಸರಿಯಲ್ಲ. ಹಾಗೊಂದು ವೇಳೆ ಬಳಸಿದರೆ ಅದು ದಸರಾ ಸಮಿತಿಗಳಿಗೆ ಮಾಡುವ ಅನ್ಯಾಯವಾಗಲಿದೆ. ಬೆಲೆ ಏರಿಕೆಯ ಹಿನ್ನೆಲೆ ದಶಮಂಟಪಗಳು ಮತ್ತು ಕರಗಗಳಿಗೆ ಅಧಿಕ ಹಣದ ಅಗತ್ಯತೆ ಇರುತ್ತದೆ. ಸತತ ಹತ್ತು ದಿನಗಳ ಕಾಲ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ದೊಡ್ಡ ಮೊತ್ತದ ಆರ್ಥಿಕ ಶಕ್ತಿ ಬೇಕಾಗುತ್ತದೆ.
ಆದ್ದರಿಂದ ಜಿಲ್ಲೆಯ ಶಾಸಕರುಗಳು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿವರ್ಷ ಬಜೆಟ್ ನಲ್ಲಿ 2 ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ಡಾ.ಮಂತರ್ ಗೌಡ ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಉದ್ಭವಿಸುವ ಕಾವೇರಿ ನದಿಯಿಂದ ರಾಜ್ಯದ ಆರ್ಥಿಕ ಬಲ ಹೆಚ್ಚುತ್ತಿದೆ. ನದಿ ಪ್ರವಾಹದಿಂದ ಅನೇಕ ಕಷ್ಟ, ನಷ್ಟಗಳ ನಡುವೆ ಜಿಲ್ಲೆಯ ಜನ ಜೀವನ ಸಾಗಿಸುತ್ತಿದ್ದಾರೆ. ವರ್ಷಕ್ಕೊಂದು ದಸರಾ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲು ಮಡಿಕೇರಿಗೆ ಹೆಚ್ಚಿನ ಅನುದಾನ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಾಗುವುದಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.