ಮಡಿಕೇರಿ, ಸೆ.24: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ಕೊಡವರ ಮೇಲೆ ಅಪಾರ ಅಭಿಮಾನ ತೋರಿರುವ ಹಿರಿಯ ರಾಜಕಾರಣಿ, ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ತಮ್ಮ ರಾಜ್ಯಸಭಾ ನಿಧಿಯಿಂದ ಕುಗ್ರಾಮಗಳ “ಬಲ್ಯಮನೆ” ರಸ್ತೆ ಮತ್ತು ಇತರ ರಸ್ತೆಗಳ ಅಭಿವೃದ್ಧಿಗೆ 2.46 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಸಿಎನ್ಸಿ ಸಂಘಟನೆಯ ಮನವಿಗೆ ಸ್ಪಂದಿಸಿ ರಾಜ್ಯಸಭಾ ನಿಧಿಯಿಂದ ಇಷ್ಟು ದೊಡ್ಡ ಮೊತ್ತದ ಕೊಡುಗೆ ನೀಡಿರುವುದು ಶ್ಲಾಘನೀಯ ಮತ್ತು ಸಂಘಟನೆಯೊಂದರ ಕೋರಿಕೆಗೆ ಈ ರೀತಿಯಲ್ಲಿ ಸ್ಪಂದಿಸಿರುವುದು ವಿಶೇಷ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗಾಗಿ ದೊಡ್ಡ ಪ್ರಮಾಣದ ಆರ್ಥಿಕ ಸಹಾಯವನ್ನು ನೀಡಿದ ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಈ ಕುರಿತು ಮುತುವರ್ಜಿ ವಹಿಸಿದ ವಿರಾಟ್ ಹಿಂದೂಸ್ಥಾನ್ ಸಂಗಮ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಡಾ.ಸ್ವಾಮಿಯವರ ಆಪ್ತ ಮುಂಬಯಿಯ ಜಗದೀಶ್ ಶೆಟ್ಟಿಯ ಅವರುಗಳಿಗೆ ಕೊಡವರ ಪರವಾಗಿ ಸಿ.ಎನ್.ಸಿ ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದು ನಾಚಪ್ಪ ಹೇಳಿದ್ದಾರೆ.
ರೂ.2.46 ಕೋಟಿಯನ್ನು ಮೂರು ವಿಭಾಗಗಳನ್ನಾಗಿ ಮಾಡಿದ್ದು, 1ನೇ ವಿಭಾಗಕ್ಕೆ ರೂ. 1.50 ಕೋಟಿ, 2ನೇ ವಿಭಾಗಕ್ಕೆ ರೂ.21.14 ಲಕ್ಷ ಮತ್ತು 3ನೇ ವಿಭಾಗಕ್ಕೆ ರೂ.75 ಲಕ್ಷ ಎಂದು ಬಿಡುಗಡೆಗೊಳಿಸಲಾಗಿದೆ.
ಮುಂಬಯಿನ ಸಬ್ ಅರ್ಬನ್ ಡಿಸ್ಟ್ರಿಕ್ಟ್ ಕಲೆಕ್ಟೊರೇಟ್ಗೆ ಹಣ ಜಮಾವಣೆಗೊಂಡಿದ್ದು, ಅಲ್ಲಿಂದ ನೇರವಾಗಿ ಕೊಡಗು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆಗೊಂಡಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳು
ಒಂದೂವರೆ ಕೋಟಿ ರೂ.ಗಳಲ್ಲಿ ಕುಶಾಲನಗರ ತಾಲ್ಲೂಕಿನ “ನೂರೊಕ್ಕನಾಡ್ ಹಿಲ್ಸ್” ರಸ್ತೆ, ಮರಗೋಡು ಪಂಚಾಯಿತಿ, ಮಡಿಕೇರಿ ತಾಲ್ಲೂಕಿನ ಕತ್ತಲೆಕಾಡು ರಸ್ತೆ ಅಭಿವೃದ್ಧಿ, ರೂ.21,14 ಲಕ್ಷದಲ್ಲಿ ಕಡಗದಾಳು ಪಂಚಾಯಿತಿ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಎನ್.ಎ.ಅಪ್ಪಯ್ಯ ಹಾಗೂ ಎನ್.ಕೆ.ನಂದಾ ಅವರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.75 ಲಕ್ಷದಲ್ಲಿ ಮಡಿಕೇರಿ ತಾಲ್ಲೂಕು, ಕುಶಾಲನಗರ ತಾಲ್ಲೂಕು, ಸೋಮವಾರಪೇಟೆ ತಾಲ್ಲೂಕು, ವಿರಾಜಪೇಟೆ ತಾಲ್ಲೂಕು ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿನ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಲಿವೆ.
ರೂ.75 ಲಕ್ಷವನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ. ರೂ.30 ಲಕ್ಷದಲ್ಲಿ ಸೋಮವಾರಪೇಟೆ ತಾಲ್ಲೂಕು ಕೆದಕಲ್ ಗ್ರಾ.ಪಂ “ಪುಲ್ಲೇರ ಐನ್ಮನೆ” ರಸ್ತೆ ಅಭಿವೃದ್ಧಿ, ರೂ.10 ಲಕ್ಷ ಹಣವನ್ನು ಮಡಿಕೇರಿ ತಾಲ್ಲೂಕು ಚೆಯ್ಯಂಡಾಣೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕರಡ ಗ್ರಾಮದ “ಮಲೆತಿರಿಕೆ ದೇವನೆಲೆ”ಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.10 ಲಕ್ಷ, ವಿರಾಜಪೇಟೆ ತಾಲ್ಲೂಕು ಕಂಡAಗಾಲ ಗ್ರಾಮಪಂಚಾಯಿತಿ ವ್ಯಾಪ್ತಿಯ “ಬಲ್ಲಡಿಚಂಡ ಬಲ್ಯಮನೆ” ರಸ್ತೆ ಅಭಿವೃದ್ಧಿ, ರೂ.5 ಲಕ್ಷದಲ್ಲಿ ವಿರಾಜಪೇಟೆ ತಾಲ್ಲೂಕು ಚಂಬೆಳ್ಳೂರು ಗ್ರಾಮದ “ಚಂಬಂಡ ಜನತ್ಕುಮಾರ್”ರವರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.7 ಲಕ್ಷದಲ್ಲಿ ಮಡಿಕೇರಿ ತಾಲ್ಲೂಕು ಚೇರಂಬಾಣೆ ಗ್ರಾ.ಪಂ ವ್ಯಾಪ್ತಿಯ ಕೊಳಗದಾಳು ಗ್ರಾಮದ “ಅಜ್ಜಿನಂಡ ಬಲ್ಯಮನೆ”ಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.6 ಲಕ್ಷದಲ್ಲಿ ಮಡಿಕೇರಿ ತಾಲ್ಲೂಕು ಚೇರಂಬಾಣೆ ಗ್ರಾ.ಪಂ ವ್ಯಾಪ್ತಿಯ ಬೇಂಗೂರು ಗ್ರಾಮದ “ಮಂದಪಂಡ ಬಲ್ಯಮನೆ”ಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.3.50 ಲಕ್ಷದಲ್ಲಿ ಪೊನ್ನಂಪೇಟೆ ತಾಲ್ಲೂಕು ಕುಟ್ಟ ಗ್ರಾ.ಪಂ ವ್ಯಾಪ್ತಿಯ ಚೂರಿಕಾಡ್ ಕೆ.ಬಾಡಗ ಗ್ರಾಮದ “ಅಜ್ಜಿಕುಟ್ಟಿರ ಲೋಕೇಶ್” ಅವರ ಮನೆಗೆ ತೆರಳುವ ರಸ್ತೆ, ರೂ.3.50 ಲಕ್ಷ ಕುಶಾಲನಗರ ತಾಲ್ಲೂಕು, ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಚಿಕ್ಕಬೆಟ್ಟಗೇರಿ ಗ್ರಾಮದ ಎನ್.ಯು.ಅಚ್ಚಯ್ಯ ಅವರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ.
ರೂ.2.46 ಕೋಟಿಯ ಅಭಿವೃದ್ಧಿ ಕಾರ್ಯವನ್ನು ಕೊಡಗು ಲೋಕೋಪಯೋಗಿ ಇಲಾಖೆಗೆ ವಹಿಸಿಕೊಡಲಾಗಿದೆ. ಒಂದನೇ ವಿಭಾಗದ ಅಭಿವೃದ್ಧಿ ಕಾರ್ಯದ “ಭೂಮಿಪೂಜೆ”ಯನ್ನು ಡಾ.ಸುಬ್ರಮಣ್ಯನ್ ಸ್ವಾಮಿ ಅವರ ಮುಂಬಯಿ ಪ್ರತಿನಿಧಿ ನೆರವೇರಿಸಲಿದ್ದಾರೆ. ಉಳಿದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಭೂಮಿಪೂಜೆಯನ್ನು ನಾನು ನೆರವೇರಿಸಬೇಕೆಂದು ಡಾ.ಸ್ವಾಮಿ ಅವರು ಸೂಚಿಸಿರುವುದಾಗಿ ನಾಚಪ್ಪ ಹೇಳಿದ್ದಾರೆ.
ಇದೇ ನ.26ರಂದು ಮಡಿಕೇರಿಯಲ್ಲಿ ನಡೆಯುವ “32ನೇ ಕೊಡವ ನ್ಯಾಷನಲ್ ಡೇ”ಗೆ ಆಗಮಿಸುವ ಡಾ.ಸ್ವಾಮಿ ಅವರು ಪೂರ್ಣಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ. ಅನುದಾನದ ಸಂಬಂಧದ ಪತ್ರವ್ಯವಹಾರಗಳಿಗೆ ಸ್ಪಂದಿಸಿ, ತುರ್ತು ಕ್ರಮ ಕೈಗೊಂಡು ಸಹಕರಿಸಿದ ಡಾ. ಸುಬ್ರಮಣಿಯನ್ ಸ್ವಾಮಿ, ಕೊಡಗು ಜಿಲ್ಲಾಧಿಕಾರಿಗಳು, ಸಿಬ್ಬಂದಿ ವರ್ಗ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಮತ್ತವರ ಸಹಪಾಠಿ ಸಹದ್ಯೋಗಿಗಳ ಕಾಳಜಿಗೆ ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ.