ಹುಲ್ಲಹಳ್ಳಿ: ವರದಕ್ಷಿಣೆ ದಾಹಕ್ಕೆ ಗೃಹಿಣಿ ಬಲಿಯಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದ್ದು, ಈ ಸಂಬಂಧ ಪತಿ ಸೇರಿದಂತೆ ಐವರನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ 22 ದಿನಗಳ ಹಿಂದೆ ಮಮತಾ(20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಪೋಷಕರು ಮಗಳ ಸಾವಿಗೆ ಗಂಡನ ಮನೆಯಲ್ಲಿ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದರು.
ಮಮತಾಳ ಮದುವೆ ಪ್ರೇಮಚಂದ್ರ ನಾಯಕ ಜತೆ 2021, ಮೇ ನಲ್ಲಿ ನೆರವೇರಿತ್ತು. ಮದುವೆ ವೇಳೆ 30 ಗ್ರಾಂ ಚಿನ್ನ 80 ಸಾವಿರ ನಗದು ವರದಕ್ಷಿಣೆಯಾಗಿ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ನಂತರದ ದಿನಗಳಲ್ಲಿ ವರದಕ್ಷಿಣೆ ವಿಚಾರದಲ್ಲಿ ಕ್ಯಾತೆ ತೆಗೆದ ಅಳೀಮಯ್ಯ ಮಗಳು ಮಮತಾ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದ. ಇದಕ್ಕೆ ಮನೆಯವರ ಕುಮ್ಮಕ್ಕೂ ಇತ್ತು. ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿ ಅಟ್ಟಹಾಸ ಮೆರೆದಿದ್ದರು.
ಗೌರಿಗಣೇಶ ಹಬ್ಬದ ದಿನ ಮಮತಾ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಆಕೆ ಸಾವನ್ನಪ್ಪಿದ ಮರುಕ್ಷಣವೇ ಪತಿ ಪ್ರೇಮಚಂದ್ರನಾಯಕ್ ನಾಪತ್ತೆಯಾಗಿದ್ದಾನೆ. ಆತನೇ ಕೊಲೆ ಮಾಡಿದ್ದಾನೆ ಎಂದು ಮಮತಾಳ ತಾಯಿ ಭಾಗ್ಯ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಪ್ರೇಮನಾಯಕ, ಯಶೋಧ, ಚಿನ್ನ, ಶಂಕರನಾಯಕ, ಅನುಜ ಮೇಲೆ ಕೊಲೆ ಪ್ರಕರಣ ದಾಖಲು ಮಾಡಿ ಬಂಧಿಸಿದ್ದಾರೆ.