ಕುಶಾಲನಗರ: ಸರ್ಕಾರ ಕೊಡಗು ಜಿಲ್ಲೆಗೆ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ತಿಳಿಸಿದರು.
ನಗರದ ಪ್ರವಾಹ ಪೀಡಿತ ಪ್ರದೇಶಗಳಾದ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆ ಗಳಿಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಕೆಲವು ಜಿಲ್ಲೆಗಳಿಗೆ ಮಳೆ ಪರಿಹಾರವಾಗಿ ಸರಕಾರ ಹಣ ಘೋಷಣೆ ಮಾಡಿದೆ ಆದರೆ ಕೊಡಗಿನ ಜಿಲ್ಲಾಧಿಕಾರಿಗಳ ಖಾತೆಗೆ ಮುಂಜಾಗ್ರತಾ ಕ್ರಮವಾಗಿ 35 ಕೋಟಿಗಳನ್ನು ಇಡಲಾಗಿದೆ. ಮಳೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಜವಬ್ದಾರಿ ನೀಡಲಾಗಿದೆ. ಹೀಗಾಗಿ ಮಳೆ ಪರಿಹಾಋ ನೀಡಲು ಕೊಡಗಿಗೆ ಯಾವುದೇ ಹಣದ ಕೊರತೆ ಇಲ್ಲ ಎಂದು ತಿಳಿಸಿದರು,
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮತ್ತಷ್ಟು ಪರಿಹಾರಕ್ಕಾಗಿ ಮತ್ತು ಅಗತ್ಯಕ್ರಮಕ್ಕಾಗಿ ನುರಿತ ಮುಖ್ಯ ಅಭಿಯಂತರರ ಸಭೆಯನ್ನು ಶೀಘ್ರದಲ್ಲಿ ನಡೆಸಲಾಗುವುದು. ಕಾವೇರಿ ನದಿಯ ಹೂಳು ತೆಗೆಯಲು ಹಾಗೂ ನದಿಗೆ ಗೇವಿಯನ್ ವಾಲ್ ನಿರ್ಮಿಸಲು ಮತ್ತು ಹಾರಂಗಿ ಜಲಾಶಯದ ಹೂಳು ತೆಗೆಯಲು 130 ಕೋಟಿ ರೂ ಗಳ ಅನುದಾನವನ್ನು ಕಾಯ್ದಿರಿಸಲಾಗಿದೆ. ಮಳೆ ಕಡಿಮೆಯಾದ ಮೇಲೆ ಹೂಳೆತ್ತುವ ಕಾರ್ಯವನ್ನು ಪ್ರಾರಂಭಿಸಲಾಗುವುದು. ಆದ್ದರಿಂದ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಬೇಸಿಗೆಯಲ್ಲಿ ಕೃಷಿಗೆ ಕಾಲುವೆ ಮೂಲಕ ನೀರು ಹರಿಬಿಡಲಾಗುತ್ತಿತ್ತು. ಆದರೆ ಹುಣಸೂರು ಮತ್ತು ಪಿರಿಯಾಪಟ್ಟಣದ ರೈತರು ಹೊಗೆಸೊಪ್ಪು ಹೆಚ್ಚಾಗಿ ಬೆಳೆಯುವುರಿಂದ ಕಾಲುವೆಯಲ್ಲಿ ನೀರು ಹರಿಬಿಡುವುದರಿಂದ ಹೊಗೆಸೊಪ್ಪಿನ ಇಳುವರಿ ಕಡಿಮೆಯಾಗಿ ರೈತರಿಗೆ ತೊಂದರೆ ಉಂಟಾಗುತ್ತದೆ ಎಂದು ರೈತರ ವಿರೋಧವಿದೆ ಎಂದು ಸ್ಪಷ್ಟನೆ ನೀಡಿದರಲ್ಲದೆ, ಬೇಸಿಗೆಯಲ್ಲಿ ನದಿಯಿಂದ ಮರಳು ತೆಗೆಯಲು ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ ಮರಳು ನೂತನ ನೀತಿಗೆ ನಾಂದಿ ಹಾಡಲಾಗುವುದು ಎಂದು ಇದೇ ವೇಳೆ ಅವರು ಹೇಳಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ 2018 ನೇ ಇಸವಿಯ ವರೆಗೆ ನಗರದ ಸುತ್ತಮುತ್ತ ಕಾವೇರಿ ನದಿಯಿಂದ ಯಾವುದೇ ಪ್ರವಾಹದ ಸಮಸ್ಯೆ ಇರಲಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಿಂದ ಸಮಸ್ಯೆ ಪ್ರಾರಂಭವಾಗಿದೆ ನೆರೆ ಹಾವಳಿಗೆ ಸಿಲುಕುವವರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಬೇಸಿಗೆಯಲ್ಲಿ ಹಾರಂಗಿ ಜಲಾಶಯದಿಂದ ಸಂಪೂರ್ಣ ನೀರು ಖಾಲಿ ಮಾಡಿ ಹೂಳೆತ್ತಲಾಗುವುದು. ಜಲಾಶಯ 8.5 ಟಿ.ಎಂ.ಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದು 7 ಟಿ.ಎಂ.ಸಿ. ಯಷ್ಟು ಮಾತ್ರ ನೀರು ಸಂಗ್ರಹವಾಗುತ್ತಿದೆ. ಇನ್ನುಳಿದ 7.5ರಷ್ಟು ಹೂಳು ತುಂಬಿರುವುದರಿಂದ ಮೊದಲು ಹೂಳೆತ್ತುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಇದರಿಂದ ಮಳೆಗಾಲದಲ್ಲಿ ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭ ಸಾಯಿ ಬಡಾವಣೆಯ ಕೆಲವು ನಿವಾಸಿಗಳು ಪ್ರವಾಹದಿಂದ ಆಗುತ್ತಿರುವ ಹಾನಿ ಮತ್ತು ಆಂತಕದ ಬಗ್ಗೆ ಉಸ್ತುವಾರಿ ಸಚಿವರಿಗೆ ವಿವರಿಸಿದರು. ನಿವಾಸಿಗಳ ಅಳಲು ಆಲಿಸಿದ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಚಿವರ ಭೇಟಿಯ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಜೈವರ್ಧನ.ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚರಣ್, ಜಿಲ್ಲಾಧಿಕಾರಿ ಡಾ.ಸತೀಶ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ, ತಹಶೀಲ್ದಾರ್ ಪ್ರಕಾಶ್, ಪ.ಪಂ.ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.