ಮಡಿಕೇರಿ: ಕೊಡಗಿನ ಕಾವೇರಿ ಹಾಗೂ ಕೊಡವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಸಂದೇಶ ರವಾನಿಸಿದ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದೆ.
ಕೊಡಗಿನ ಕುಲದೇವಿ, ಜೀವನದಿ ಕಾವೇರಿ ಹಾಗೂ ಕೊಡವ ಮಹಿಳೆಯರ ಬಗ್ಗೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದ್ದು, ಇವರುಗಳನ್ನು ತಕ್ಷಣ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಮನವಿ ಮಾಡಿದರು.
ನಾಡಿನ ಜೀವನದಿಯಾಗಿರುವ ಕಾವೇರಿಯ ಅವಹೇಳನದಿಂದ ಕೊಡವರ ಹಾಗೂ ಕೊಡಗಿನ ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗಿದೆ. ಕೊಡಗಿನ ಸಾಮರಸ್ಯ ಮತ್ತು ಶಾಂತಿಗೆ ದಕ್ಕೆ ತರುವ ಷಡ್ಯಂತ್ರ ರೂಪಿಸುತ್ತಿರುವ ದುಷ್ಕರ್ಮಿಗಳನ್ನು ಮಟ್ಟ ಹಾಕುವ ಮೂಲಕ ಮುಂದೆ ಎದುರಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು.
ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ವಿರುದ್ಧ ಕ್ರಮ ಕೈಗೊಳ್ಳಬಾರದು. ಸಮಗ್ರ ತನಿಖೆ ನಡೆಸಿ ನೈಜ ತಪ್ಪಿತಸ್ಥರನ್ನು ಬಂಧಿಸುವ ಮೂಲಕ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕೆಂದು ಪೀಟರ್ ಒತ್ತಾಯಿಸಿದರು.
ಅಲ್ಪಸಂಖ್ಯಾತರ ಘಟಕದ ನಗರ ಕಾರ್ಯದರ್ಶಿ ಫಯಾಜ್, ಸಹ ಕಾರ್ಯದರ್ಶಿ ರುಯೇಜ್, ಉಪಾಧ್ಯಕ್ಷರಾದ ನೌಶಾದ್, ಶೌಕತ್ ಹಾಗೂ ಅನಿಸ್ ಡಿಸೋಜ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.