ಗೋಣಿಕೊಪ್ಪ: ವಿಶು ಆಚರಣೆ ಸಮಾನತೆಯ ಸಂಕೇತವಾಗಿದೆ ಎಂದು ಕೊಡಗು ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಎಂ. ಎಸ್. ಸುಬ್ರಮಣಿ ಹೇಳಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ‘ನಮ್ಮ ದೇಶ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಡೀ ಶನಿವಾರ ಮೈಸೂರಮ್ಮ ನಗರದ ಕೆ. ಎನ್. ಅಶೋಕ್ ನಿವಾಸದಲ್ಲಿ ಆಯೋಜಿಸಿದ್ದ ವಿಶು ಹಬ್ಬ ಆಚರಣೆಯಲ್ಲಿ ಹಬ್ಬದ ಬಗ್ಗೆ ಮಾಹಿತಿ ಹಂಚಿಕೊಂಡರು.
ವಿಶು ಎಂಬುವುದು ಸಂಸ್ಕೃತದಲ್ಲಿ ಸಮಾನತೆ ಅರ್ಥ ಹೊಂದಿದೆ. ಸೂರ್ಯ ಭಗವಾನ್ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಪಡೆಯುವ ಕಾಲವಾಗಿದ್ದು, ಗಣಿತ ಶಾಸ್ತ್ರದ ಪ್ರಕಾರ ಪ್ರಕೃತಿಯಲ್ಲಿ ಕೂಡ ಬದಲಾವಣೆ ಕಾಣಬಹುದಾಗಿದ್ದು, ವಿಶು ದಿನದಲ್ಲಿ 12 ಗಂಟೆ ಹಗಲು, 12 ಗಂಟೆ ರಾತ್ರಿಯನ್ನು ಕಾಣಬಹುದಾಗಿದೆ. ಹೊಂಗಿರಣದ ಬಣ್ಣ ಹೊಂದಿರುವ ಪೊನ್ನ ಹೂ ಪ್ರಕೃತಿಯ ಕೊಡುಗೆಯಾಗಿದ್ದು, ಮಲಯಾಳಿ ಸಮುದಾಯದ ವಿಶೇಷವಾಗಿ ಆಚರಣೆಯಾಗಿದೆ. ಸನಾತನ ಧರ್ಮದಲ್ಲಿ ವಿಶಿಷ್ಠ ಸಂಸ್ಕೃತಿ ಹೊಂದಿದ್ದು, ಕೃಷಿಗೆ ಪೂರಕವಾಗಿದೆ. ತಮಿಳುನಾಡು, ಪಂಜಾಬ್, ಅಸ್ಸಾಂ ಆಚರಣೆ ಇದ್ದು, ಹೊಸ ವರ್ಷವಾಗಿದೆ. ವಿಶು ಪರ್ವದಲ್ಲಿ ಒಳ್ಳೆಯದನ್ನು ಪ್ರಾರ್ಥಿಸುತ್ತೇವೆ. ಯುವ ಪೀಳಿಗೆ ಸಂಪ್ರದಾಯ ಉಳಿಸಿಕೊಳ್ಳಲು ಮುಂದಾಗಬೇಕಿದೆ. ಉಣ್ಣಿ ಅಪ್ಪಂ, ನೈ ಅಪ್ಪಂ, ಪಾಯಸ, ಇಂಜಿಪುಳಿ, ಅವಿಲ್ ವಿಶೇಷ ಬೋಜನ ಮಾಡುತ್ತೇವೆ ಎಂದರು.
ಹಿರಿಯರಾದ ಕೆ. ಎನ್. ಅಶೋಕ್ ಮಾತನಾಡಿ, ವಿಶು ಹಬ್ಬ ಕುಟುಂಬದಲ್ಲಿ ಸಂಭ್ರಮಕ್ಕೆ ಕಾರಣವಾಗಲಿದೆ. ಹಿರಿಯರು ರೂಪಿಸಿದ ಆಚರಣೆಯನ್ನು ನಾವು ಮುಂದಿನ ಪೀಳಿಗೆಗೆ ಆಚರಣೆ ಮೂಲಕ ಮಾರ್ಗದರ್ಶನ ನೀಡುತ್ತಿದ್ದೇವೆ. ಹೊಸ ವರ್ಷವಾಗಿ ಚೈತನ್ಯದಿಂದ ಪಾಲ್ಗೊಳ್ಳುತ್ತೇವೆ. ಹಿರಿಯರಿಗೆ ಗೌರವ ಕೊಡುವುದು ಹಬ್ಬದ ವಿಶೇಷತೆಯಲ್ಲೊಂದು ಎಂದರು.
ಹೀಗಿತ್ತು ಆಚರಣೆ: ಕಣಿ ಎಂಬುವುದು ಆಚರಣೆಯ ವಿಶೇಷತೆಯಾಗಿದೆ. ಮನೆಯಲ್ಲಿ ಶ್ರೀಕೃಷ್ಣನ ವಿಗ್ರಹ ಇಟ್ಟು ತುಳಸಿ ಮಾಲೆ, ಹೂ, ಹಣ್ಣು ಹಂಪಲು ಇಟ್ಟು ಪೂಜಿಸಲಾಗುತ್ತದೆ. ಗಣಪತಿಗೆ ಇಷ್ಟವಾದ ಹಲಸು, ಕೃಷ್ಣನಿಗೆ ಇಷ್ಟವಾದ ಕದಣಿ ಬಾಳೆ, ನವಿಲು ಗರಿ, ಬೆಳ್ಳರಿ, ಮರುಗನಿಗೆ ಇಷ್ಟವಾದ ಮಾವಿನ ಹಣ್ಣು, ತೆಂಗಿನಕಾಯಿ ಇಟ್ಟು, ಬಿಳಿ ಬಟ್ಟೆಯಲ್ಲಿ ಎಲೆ ಅಡಕೆ, ನಾಣ್ಯ, ಆಭರಣ ಇಡಲಾಗುತ್ತದೆ. ದೀಪ ಹಚ್ಚಿ ಹಿರಿಯರು ಪೂಜಿಸುತ್ತಾರೆ. ಹಬ್ಬದ ದಿನ ಮನೆಯವರು ಎದ್ದು ಬಂದು ಮೊದಲು ಕಣ್ಣುಗಳನ್ನು ಮುಚ್ಚಿಕೊಂಡು ಬಂದು ಕಣಿ ನೋಡುತ್ತಾರೆ. ಹಿರಿಯರ ಕಾಲಿಗೆ ನಮಸ್ಕರಿಸಿ ವಿಶು ಕೈನೀಟಂ ಎಂದು ಹಣ, ಉಡುಗೊರೆಯನ್ನು ನೀಡಲಾಗುತ್ತದೆ. ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಗಂಧದ ತಿಲಕ ಇಟ್ಟು ಪೂಜಿಸುತ್ತಾರೆ.
ಮಲಯಾಳಿ ಸಮುದಾಯದ ಬೇಬಿ, ಕೆ. ಎ. ಅಭಿಲಾಷ್, ಶಿಲ್ಪ, ವಿಹಾನ್, ನಿಖಿಲ್, ನಿತಿಶ್, ರತಿ ಪುರುಷೋತ್ತಮ್, ಕಾರ್ತಿಕ್ ಆಚರಣೆಯಲ್ಲಿ ಪಾಲ್ಗೊಂಡರು.
ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಸಂಚಾಲಕ ವಿ. ವಿ. ಅರುಣ್ಕುಮಾರ್, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ನಿದೇರ್ಶಕ ದರ್ಶನ್ ದೇವಯ್ಯ, ಸಿಂಗಿ ಸತೀಶ್ ಇದ್ದರು.