ಮೈಸೂರು: ಸೈನಿಕ ಅಕಾಡೆಮಿ (SAM) ಹಾಗೂ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವ ಕಲಾ ದಿನಾಚರಣೆ ಅಂಗವಾಗಿ ಬೆಳವಾಡಿ ಯಲ್ಲಿರುವ ಸೈನಿಕ ಶಾಲೆಯಲ್ಲಿ 14 ವರ್ಷದ ಒಳಗಿರುವ 50ಕ್ಕೂ ಹೆಚ್ಚು ಮಕ್ಕಳು ಪರಿಸರದ ಬಗ್ಗೆ ಚಿತ್ರಕಲಾ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮೊದಲನೇ ಬಹುಮಾನ ಹಂಸಶ್ರೀ , ದ್ವಿತೀಯ ತನ್ಮಯ್, ತೃತೀಯ ಯಶಸ್, ನಾಲ್ಕನೇ ಬಹುಮಾನ ಅಮೃತ, ಐದನೇ ಬಹುಮಾನ ಖುಷಿ ಬಹುಮಾನ ಪಡೆದುಕೊಂಡರು. ಸ್ಪರ್ಧಿಸಿದ ಎಲ್ಲ ಮಕ್ಕಳಿಗೂ ಅಭಿನಂದನ ಪತ್ರ ವಿತರಿಸಲಾಯಿತು.
ಸೈನಿಕ ಅಕಾಡೆಮಿ ಮೈಸೂರಿನ ಸಂಸ್ಥಾಪಕರು ಹಾಗೂ ನಿವೃತ್ತ ಕಮಾಂಡೋ ಶ್ರೀಧರ್ ಮಾತನಾಡಿ, ಪರಿಸರ ಉತ್ತಮವಾಗಿದ್ದಲ್ಲಿ ಮಾತ್ರ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಿದೆ. ಭೂಮಿ, ನೀರು, ಗಾಳಿ, ಬೆಳಕು ಮೊದಲಾದವುಗಳನ್ನು ಒಳಗೊಂಡ ಪ್ರಕೃತಿ ದೇವರ ಕೊಡುಗೆ. ಅದನ್ನು ಕಾಪಾಡಿಕೊಂಡು ಹೋಗುವ ಹೊಣೆ ಎಲ್ಲರ ಮೇಲಿದೆ. ಮಕ್ಕಳಿಗೆ ಪರಿಸರದ ಪಾಠ ಮನೆಯಿಂದಲೇ ಆರಂಭವಾಗಬೇಕಿದೆ ಎಂದರು.
ಮನೋರೋಗ ತಜ್ಞರಾದ ಡಾ. ರೇಖಾ ಮನಶಾಂತಿ ಮಾತನಾಡಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕನಸು ಕಂಡರೆ ದೊಡ್ಡವರಾದ ಮೇಲೆ ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಬೇಕು ಎಂದರು.
ಹಿರಿಯ ಪತ್ರಕರ್ತ ಅನಿಲ್ ಕುಮಾರ್ ಮಾತನಾಡಿ ಮಕ್ಕಳ ಚಿತ್ರಗಳನ್ನು ನೋಡುವುದು ಚಂದ, ಅವರಿಗೆ ಬರೆಯಲು ಬರದಿದ್ದರೂ ಏನೋ ಒಂದು ಚಿತ್ರ ಬರೆಯುತ್ತಾರೆ. ಎಲ್ಲರೂ ಒಂದೇ ರೀತಿ ಬರೆಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಆಲೋಚನೆ ಕ್ರಮಗಳಿಗೆ ಅನು ಗುಣವಾಗಿ ವಿಭಿನ್ನವಾಗಿ ಬರೆಯುತ್ತಾರೆ. ಅವರ ಕಲ್ಪನೆ ಏನಿರುತ್ತದೆ ಹಾಗೆ ಬರೆಯುತ್ತಾರೆ. ಮಕ್ಕಳಿಗೆ ಇದು ಒಳ್ಳೆಯ ವೇದಿಕೆ. ಮೈಸೂರು ನಗರದಲ್ಲಿ ಅನೇಕ ಚಿತ್ರಕಲಾ ಶಾಲೆಗಳಿವೆ. ಆ ಶಾಲೆಯ ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಸ್ವಾತಿ,ಶಿಕ್ಷಕರಾದ ರವಿ, ವಿನುತಾ, ಸುನಿತಾ, ಸಿದ್ದಾರ್ಥ್, ಗಗನ್, ವಿಜಯಕುಮಾರ್ ಮುಂತಾದವರು ಹಾಜರಿದ್ದರು.