ಮಡಿಕೇರಿ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ಆದೇಶದ ಬಗ್ಗೆ ‘ಕಮೆಂಟ್’ ಮಾಡಿದ ಯುವಕನೊಬ್ಬನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಡಗು ಜಿಲ್ಲೆಯ ನಿವಾಸಿ, ಕಲ್ಲುಗುಂಡಿಯ ಅಬ್ದುಲ್ ಮುತಾಲಿಬ್ ಎಂಬಾತ ಇಲ್ಲಸಲ್ಲದ ಕಾಮೆಂಟ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹಿಜಾಬ್ ತೀರ್ಪಿನ ಕುರಿತು ನ್ಯಾಯಾಲಯನೀಡಿದ್ದ ಆದೇಶದ ಬಗ್ಗೆ ಖಾಸಗಿ ನ್ಯೂಸ್ ವೆಬ್ ಪೋರ್ಟಲ್’ ಒಂದರಲ್ಲಿ ಸುದ್ದಿ ಪ್ರಕಟವಾಗಿತ್ತು. ವೆಬ್ ಪೊರ್ಟಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸುದ್ದಿಗೆ ಕಾಮೆಂಟ್ ಮಾಡಿದ್ದ ಮುತಾಲಿಬ್, ‘ಹಿಜಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂಬುದನ್ನು ಯಾವ ಆಧಾರದ ಮೇಲೆ ನ್ಯಾಯಾಲಯ ಹೇಳಿದೆ ಎಂಬದರ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಕಮೆಂಟ್ ಜೊತೆಗೆ ಅನ್ಯದರ್ಮೀಯರ ವಿರುದ್ಧ ಅವಾಚ್ಯ ಶಬ್ಧಗಳನ್ನು ಉಪಯೋಗಿಸಿ ಕಾಮೆಂಟ್ ಮಾಡಿದ್ದ ಎಂದು ತಿಳಿದುಬಂದಿದೆ.
ಇದನ್ನು ಗಮನಿಸಿದ ಚೆಂಬು ಗ್ರಾಮದ ಇಂದ್ರೇಶ್ ಎಂಬವರು ಆತನ ಕಾಮೆಂಟ್ ಗಳ ‘ಸ್ಕ್ರೀನ್ ಶಾಟ್’ ಸಹಿತ ಪೊಲೀಸರಿಗೆ ದೂರು ನೀಡಿದ್ದರು. ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅಬ್ದುಲ್, ಸಾಮಾಜಿಕ ಜಾಲತಾಣದಲ್ಲಿರುವ ತನ್ನೆಲ್ಲಾ ಪೋಸ್ಟ್ನ್ನು ಡಿಲೀಟ್ ಮಾಡಿ ಪಾರಾಗುವ ಯತ್ನ ನಡೆಸಿದ್ದಾನೆ. ಇದೀಗ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.