ಬೆಂಗಳೂರು, ಮಾ.17 : ಮುಸ್ಲಿಂ ಸಂಘಟನೆಗಳು ಇಂದು ಬಂದ್ಗೆ ಕರೆ ಕೊಟ್ಟಿದ್ದರಿಂದ ನಗರಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಬಂದ್ ಶಾಂತಿಯುತವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಶಾಂತಿಯುತವಾಗಿ ಬಂದ್ ನಡೆಸಿದ್ದಾರೆ ಎಂದು ಹೇಳಿದರು.
ಪ್ರಮುಖ ಸ್ಥಳಗಳಾದ ಶಿವಾಜಿನಗರ, ಫ್ರೇಜರ್ ಟೌನ್, ಕಮರ್ಷಿಯಲ್ ಸ್ಟ್ರೀಟ್, ಟ್ಯಾನರಿ ರಸ್ತೆ, ಮೆಜಸ್ಟಿಕ್, ಮಾರ್ಕೆಟ್ ಹಾಗೂ ಬಂಬೂ ಬಜಾರ್ನಲ್ಲಿ ಕೆಲವು ಅಂಗಡಿಗಳನ್ನು ಮುಚ್ಚಲಾಗಿತ್ತು ಎಂದು ಹೇಳಿದರು.
ನಿನ್ನೆ ಸಂಜೆ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿ ಶಾಂತಿ-ಸುವ್ಯವಸ್ಥೆ ಕಾಪಾಡುವುಂತೆ ಸೂಚಿಸಿದ್ದೆವು. ಅದರಂತೆ ಅವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಎಂದು ಕಮಲ್ಪಂತ್ ತಿಳಿಸಿದರು.
ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಪೊಲೀಸರು ಪಥ ಸಂಚಲನ ನಡೆಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ ಮಾಡಲಾಗಿದೆ ಎಂದು ಹೇಳಿದರು.