ಮಡಿಕೇರಿ: ಹಿಜಾಬ್ ಮತ್ತು ಕೇಸರಿ ನಡುವಿನ ಸಂಘರ್ಷ ದಿನದಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಮಂಗಳವಾರ ಈ ಸಂಬಂಧ ಉಚ್ಛ ನ್ಯಾಯಾಲಯದ ತೀರ್ಪು ಬರುವ ನಿರೀಕ್ಷೆಯಲ್ಲಿರುವಾಗಲೇ ರಾಜ್ಯದ ಹಲವೆಡೆ ಸಂಘರ್ಷಗಳು ಆರಂಭವಾಗಿವೆ. ಅದರಂತೆ ಕೊಡಗಿನ ಕುಶಾಲಗರದಲ್ಲಿಯೂ ವಿದ್ಯಾರ್ಥಿಗಳ ನಡುವೆ ಸಂಘರ್ಷವೇರ್ಪಟ್ಟಿದ್ದು ಪೊಲೀಸರ ಮಧ್ಯ ಪ್ರವೇಶದಿಂದ ಅನಾಹುತ ತಪ್ಪಿದಂತಾಗಿದೆ.
ಬೆಳಿಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗಳಿಗೆ ತೆರಳುತ್ತಿರುವುದನ್ನು ಖಂಡಿಸಿ ಕೆಲವು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಪ್ರತಿಭಟನೆ ನಡೆಸಿದರು. ನಗರದ ಕೆ.ಎಂ.ಕಾರ್ಯಪ್ಪ ಸರ್ಕಲ್ ನಲ್ಲಿ ನೂರಾರು ವಿದ್ಯಾರ್ಥಿಗಳು ಜಮಾಯಿಸಿದರು. ಈ ಸಂದರ್ಭದಲ್ಲಿ ಕನ್ನಡಭಾರತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮನ್ವತಿ ಮಾತನಾಡಿ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಬುರ್ಕಾ ಧರಿಸಿ ಕಾಲೇಜಿಗೆ ಆಗಮಿಸುತ್ತಾರೆ ವಿದ್ಯಾ ಸಂಸ್ಥೆಗಳಲ್ಲಿ ಸಮಾನತೆ ಎಂಬುದು ಇರಬೇಕು ಹಿಜಾಬ್ ಧರಿಸಿ ಆಗಮಿಸುವುರಿಂದ ಅಸಮಾನತೆ ತಾಂಡ ವಾಡುತ್ತಿದೆ ಎಂದು ಆರೋಪಿಸಿದರಲ್ಲದೆ, ಅವರು ಹಿಜಾಬ್ ಮತ್ತು ಬುರ್ಕಾ ಧರಿಸಿ ಆಗಮಿಸಿದರೆ ನಾವು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಮುಸ್ಲಿಂ ಕೆಲ ಯುವಕರು ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಹಿಂದು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿದ್ದ ಸ್ಥಳಕ್ಕೆ ಆಗಮಿಸಿ ಅಂಬೇಡ್ಕರ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭ ಒಂದೆಡೆ ಮುಸ್ಲಿಂ ಯುವಕರು ಮದ್ಯ ಪ್ರವೇಶಿಸಿದರೆ ಮತ್ತೊಂದೆಡೆ ಹಿಂದು ಸಂಘಟನೆಯ ಪ್ರಮುಖರು ಮತ್ತು ಬಿಜೆಪಿ ಮುಖಂಡರಾದ ಕೆ.ಜಿ.ಮನು.ಕೃಷ್ಣಪ್ಪ, ಉಮಾಶಂಕರ್, ಮಧು ಮಧ್ಯ ಪ್ರವೇಶಿಸಿ ಪ್ರತಿಭಟನೆಗೆ ಬೆಂಬಲ ನೀಡಿ ರಸ್ತೆಗಿಳಿದಿದ್ದಾರೆ ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆಯೇ ಪೊಲೀಸರು ಮಧಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.