ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಇಕ್ಷಾ ಕಣ್ಣಿನ ಆಸ್ಪತ್ರೆಯಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗೆ ಆಯೋಜಿಸಿರುವ ಕಣ್ಣಿನ ತಪಾಸಣಾ ಉಚಿತ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಇಕ್ಷಾ ಕಣ್ಣಿನ ಆಸ್ಪತ್ರೆ ಮುಖ್ಯಸ್ಥರಾದ ಡಾ.ಅಜ್ಜಿನಿಕಂಡ ಧ್ಯಾನ್ ಚಿಣ್ಣಪ್ಪ ನೇತೃತ್ವದಲ್ಲಿ ಕಣ್ಣಿನ ತಪಾಸಣೆ ಮಾಡಲಾಯಿತು. ಪ್ರಥಮ ದಿನ 33 ಜನ ತಪಾಸಣೆ ಮಾಡಿಸಿಕೊಂಡರು.
ಮಂಗಳವಾರ, ಬುಧವಾರ ಕೂಡ ತಪಾಸಣೆ ಶಿಬಿರ ಮುಂದುವರಿಯಲಿದೆ. ಪ್ರತಿಯೊಬ್ಬರೂ ಕಣ್ಣಿನ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಅವರ ಕುಟುಂಬ ಸದಸ್ಯರಿಗೆ ಕಣ್ಣಿನ ತಪಾಸಣಾ ಶಿಬಿರ ನಮ್ಮ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಇಕ್ಷಾ ಕಣ್ಣಿನ ಆಸ್ಪತ್ರೆ ಮುಖ್ಯಸ್ಥರಾದ ಡಾ.ಅಜ್ಜಿನಿಕಂಡ ಧ್ಯಾನ್ ಚಿಣ್ಣಪ್ಪ ಹೇಳಿದರು.
ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ. ಈ ಮೊದಲು ಕಿವಿ ಪರೀಕ್ಷೆ ಮಾಡಿದ್ದು, ಇದೀಗ ಕಣ್ಣಿನ ತಪಾಸಣೆ ಮಾಡಲಾಗುತ್ತಿದೆ. ಡಾ.ಅಜ್ಜಿನಿಕಂಡ ಧ್ಯಾನ್ ಚಿಣ್ಣಪ್ಪ ಹೆಚ್ಚು ಮುತುವರ್ಜಿ ವಹಿಸಿ, ತಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿ ದ್ದಾರೆಂದು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದ್ದಾರೆ.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಉಪಾಧ್ಯಕ್ಷ ಕೆ.ಎ. ಆದಿತ್ಯ, ನಿರ್ದೇಶಕ ನವೀನ್ ಸುವರ್ಣ, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಪ್ರಸಿನ್ ಗೌಡ, ಪೊನ್ನೇಟಿ ಸುನಿಲ್, ನವೀನ್ ಡಿಸೋಜ, ವಿಶ್ವ ಕುಂಬೂರು ಮತ್ತಿತರರು ಇದ್ದರು.