ಮಡಿಕೇರಿ : ಪ್ರತಿವರ್ಷ ಮಳೆಗಾಲದಲ್ಲಿ ತ್ರಿವೇಣಿ ಸಂಗಮದ ಪ್ರವಾಹದಿಂದ ದ್ವೀಪವಾಗಿ ಮಾರ್ಪಡುವ ಭಾಗಮಂಡಲದಲ್ಲಿ ಪ್ರಸ್ತುತ ವರ್ಷ ಮತ್ತೊಂದು ಸಮಸ್ಯೆ ಕಾಡಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದಾಗಿ ರಸ್ತೆಯೆಲ್ಲಾ ಕೆಸರುಮಯವಾಗಿದ್ದು, ವಾಹನ ಸಂಚಾರ ಮತ್ತು ಪಾದಾಚಾರಿಗಳು ನಡೆದಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಬಾರಿ ದೊಡ್ಡ ಪ್ರವಾಹ ಏರ್ಪಡುವಷ್ಟು ಮಳೆಯಾಗಿಲ್ಲ. ಸಣ್ಣ ಮಳೆ ಬಂದರೂ ಇಡೀ ಭಾಗಮಂಡಲ ಕೆಸರು ಹೊಂಡವಾಗಿ ಮಾರ್ಪಡುತ್ತಿದ್ದು, ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕೆಸರಿನ ಪರದಾಟಕ್ಕಿಂತ ಪ್ರವಾಹವೇ ಲೇಸು ಎಂದು ಇಲ್ಲಿನ ನಿವಾಸಿಗಳು ಅಭಿಪ್ರಾಯಪಡುತ್ತಿದ್ದಾರೆ.
ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಆರಂಭದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಕುಂಟುತ್ತಾ ಸಾಗಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಮೇಲ್ಸೇತುವೆ ಯೋಜನೆ ಅನುಮೋದನೆ ಪಡೆದುಕೊಂಡಿತ್ತು. ಕಾವೇರಿ ನೀರಾವರಿ ನಿಗಮದ ವತಿಯಿಂದ 29.62 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಈ ಕಾಮಗಾರಿ 2018ರ ವರ್ಷಾಂತ್ಯಕ್ಕೆ ಆರಂಭವಾಯಿತು. ಒಟ್ಟು 36 ಪಿಲ್ಲರ್ಗಳ ಪೈಕಿ ಇನ್ನೂ 2 ಪಿಲ್ಲರ್ಗಳ ನಿರ್ಮಾಣ ಆಗಬೇಕಿದೆ. ಸ್ಲ್ಯಾಬ್ ಗಳ ಅಳವಡಿಕೆ ಕಾರ್ಯ ನಡೆಯುತ್ತಿದ್ದ ಸಂದರ್ಭ ಮಳೆಗಾಲ ಪ್ರಾರಂಭವಾದ್ದರಿಂದ ಕೆಲಸ ಸ್ಥಗಿತ ಮಾಡಲಾಗಿದೆ. ಮುಂದಿನ ತಿಂಗಳಿನಿಂದ ಮತ್ತೆ ಕಾಮಗಾರಿಗೆ ಸಿದ್ಧತೆ ನಡೆಸಲಾಗಿದ್ದು, ಜನವರಿಗೆ ಶೇ.90ರಷ್ಟು ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.