ಮಡಿಕೇರಿ : ನದಿ ಜಲ ಮೂಲಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಡಿ.17 ರಿಂದ ಕಾವೇರಿ ನದಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ನದಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೊಡಗು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾವೇರಿ ನೀರಾವರಿ ನಿಗಮದ ಸಹಯೋಗದೊಂದಿಗೆ ನಡೆಯಲಿರುವ ನದಿ ಉತ್ಸವ ಕಾರ್ಯಕ್ರಮ ತಲಕಾವೇರಿ ಕ್ಷೇತ್ರದಲ್ಲಿ ಡಿಸೆಂಬರ್ 17ರಂದು ಉದ್ಘಾಟನೆಗೊಳ್ಳಲಿದೆ.
ನಂತರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲೆಡೆ ಹರಿಯುವ ಕಾವೇರಿ ನದಿ ಮತ್ತು ಉಪನದಿಗಳ ತಟದ ವ್ಯಾಪ್ತಿಯಲ್ಲಿ 7 ದಿನಗಳ ಕಾಲ ನಿರಂತರ ಕಾರ್ಯಕ್ರಮ ನಡೆಯಲಿದೆ.
ಡಿ.17ರಂದು ತಲಕಾವೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ನದಿ ಉತ್ಸವ ಕಾರ್ಯಕ್ರಮ ಚಾಲನೆಗೊಳ್ಳಲಿದೆ. ಭಾಗಮಂಡಲದಲ್ಲಿ ನದಿಗೆ ಆರತಿ ಮತ್ತು ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ 18ರಂದು ಕುಶಾಲನಗರದಲ್ಲಿ ಕಾವೇರಿ ನದಿ ತಟದಲ್ಲಿ ನಡೆಯುವ ಕಾವೇರಿ ಉತ್ಸವ ಕಾರ್ಯಕ್ರಮದಲ್ಲಿ ಯೋಗ, ಮೆಡಿಟೇಶನ್, ನದಿ ಉಳಿಸುವ ಬಗ್ಗೆ ಜನರಿಂದ ಪ್ರಮಾಣ ವಚನ ಸ್ವೀಕಾರ, ಸ್ವಚ್ಛತಾ ಕಾರ್ಯ ಮತ್ತು ಶಾಲಾ-ಕಾಲೇಜು ಮಕ್ಕಳಿಗೆ ನದಿ ಮತ್ತು ಪ್ರಕೃತಿ ಬಗ್ಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ನಂತರ ಜೀವನದಿ ಕಾವೇರಿಗೆ ಮಹಾ ಆರತಿ, ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಾಗೇಶ್ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 19ರಂದು ಮಂಡ್ಯ ವ್ಯಾಪ್ತಿಯ ಶ್ರೀರಂಗಪಟ್ಟಣದ ಕಾವೇರಿ, ನಂತರದಲ್ಲಿ 20 ರಂದು ಟಿ. ನರಸೀಪುರ 21ರಂದು ಹೇಮಾವತಿ ನದಿಯ ಗೋರೂರು ವ್ಯಾಪ್ತಿಯ ಯೋಗಾನಂದ ಸ್ವಾಮಿ ದೇವಾಲಯದ ಬಳಿ, 22ರಂದು ಯಡಿಯೂರು, 23 ರಂದು ಕನಕಪುರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾವೇರಿ ಉತ್ಸವದಲ್ಲಿ ಜಿಲ್ಲಾ ಆಡಳಿತ ಸೇರಿದಂತೆ ವಿವಿಧ ಇಲಾಖೆಗಳು ಪಾಲ್ಗೊಳ್ಳಲಿವೆ ಹಾಗೂ ಜಿಲ್ಲೆಯ ಸಂಘಸಂಸ್ಥೆಗಳು ಧಾರ್ಮಿಕ ಮುಖ್ಯಸ್ಥರು ಪಾಲ್ಗೊಳ್ಳಲಿದ್ದು ನದಿ ಉತ್ಸವದ ಯಶಸ್ಸಿಗೆ ಕೈಜೋಡಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಚರ್ಚಿಸಲು ಡಿ. 6 ರಂದು 3 ಗಂಟೆಗೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಪ್ರಮುಖರ ಸಭೆ ನಡೆಯಲಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ ಡಿ ನಾಗೇಶ್ ತಿಳಿಸಿದ್ದಾರೆ.