ಕೊಡಗು: ಪಾರ್ಸಿ ಜನಾಂಗದ ರಕ್ಷಣೆಗೆ ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ ‘ಜಿಯೊ ಪಾರ್ಸಿ’ ಎಂಬ ಯೋಜನೆಯಂತೆ ಕೊಡವರಿಗೂ ‘ಕೊಡವ ಬಾಳೊ’ ಯೋಜನೆ ತರಲು ಚಿಂತನೆ ನಡೆಸಿರುವುದಾಗಿ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಕೊಡವ ಜನಾಂಗದ ಅಭಿವೃದ್ಧಿಗೆ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರಕಾರದ ಗಮನಸೆಳೆಯುವಂತೆ ಯುನೈಟೆಡ್ ಕೊಡವ ಆರ್ಗನೈಝೇಶನ್(ಯುಕೊ) ಸಂಘಟನೆ ಮೈಸೂರಿನಲ್ಲಿ ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದ ಪ್ರತಾಪ್ಸಿಂಹ, ಈ ಸಂಬಂಧ ಕೊಡಗು ಜಿಲ್ಲೆಯ ಎಲ್ಲಾ ಶಾಸಕರು,ವಿಧಾನ ಪರಿಷತ್ ಸದಸ್ಯರ ಸಹಿತ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬೇಡಿಕೆ ಮುಂದಿಡುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿ ಈಗ ಸ್ಥಾಪನೆಯಾಗಿರುವ ಇತರ ನಾಲ್ಕು ಅಭಿವೃದ್ಧಿ ನಿಗಮಗಳಿಗಿಂತಲೂ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಎಲ್ಲಾ ರೀತಿಯಲ್ಲೂ ಪ್ರಾಶಸ್ತ್ಯ ಪಡೆದಿದೆ. ಕೊಡವ ಅಭಿವೃದ್ಧಿ ನಿಗಮದಿಂದ ಕೊಡವ ಜನಾಂಗದ ಸರ್ವೋತೋಮುಖ ಅಭಿವೃದ್ಧಿ ಸಾಧ್ಯ ಎಂದು ಸಂಸದರು ಅಭಿಪ್ರಾಯಪಟ್ಟರಲ್ಲದೆ, 2023ರ ಬಜೆಟ್ ನಲ್ಲಿ ನಿಗಮ ಘೋಷಣೆಯಾಗುವ ಇಂಗಿತ ವ್ಯಕ್ತಪಡಿಸಿದರು.
ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಜನಾಂಗದ ಇತರ ಬೇಡಿಕೆಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದೂ ಸಂಸದರು ಭರವಸೆ ನೀಡಿದರು.
ಪಾರ್ಸಿ ಜನಾಂಗದ ರಕ್ಷಣೆಗೆ ಸ್ಥಾಪನೆಯಾಗಿರುವ “ಜಿಯೊ ಪಾರ್ಸಿ” ಎಂಬ ಕೇಂದ್ರದ ಯೋಜನೆಯಂತೆ ಕೊಡವರಿಗೂ *ಕೊಡವ ಬಾಳೊ ” ಯೋಜನೆ ತರಲು ಚಿಂತನೆ ನಡೆಸಿರುವುದಾಗಿ ಇದೇ ಸಂದರ್ಭ ಹೇಳಿದ ಪ್ರತಾಪ್ ಸಿಂಹ, ಅತ್ಯಂತ ಸೂಕ್ಷ್ಮ ಕೊಡವ ಜನಾಂಗದ ರಕ್ಷಣೆ ಸರಕಾರ ಮತ್ತು ರಾಜಕೀಯ ಪಕ್ಷದ ಜವಾಬ್ದಾರಿ ಎಂದೂ ನುಡಿದರು.
ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ 36 ಕಾರ್ಯಕರ್ತರ ನಿಯೋಗ ಮೈಸೂರಿನ ಜಲದರ್ಶಿನಿ ಕಚೇರಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಮಾಲೋಚನೆ ನಡೆಸಲಾಯಿತು. ನಿಯೋಗದಲ್ಲಿ ಕೊಡಗು ಹಾಗೂ ಮೈಸೂರಿನ ಯುಕೊ ಪ್ರತಿನಿಧಿಗಳು ಭಾಗಿಯಾಗಿದ್ದರು.