ಮಡಿಕೇರಿ: ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ಅ.14 ಮತ್ತು 15ರಂದು ನಡೆಯಲಿರುವ ಆಯುಧ ಪೂಜೆ ಮತ್ತು ದಸರಾ ಕಾರ್ಯಕ್ರಮ ಹಾಗೂ ಅ.17ರಂದು ನಡೆಯಲಿರುವ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಮಡಿಕೇರಿ ಗೋಣಿಕೊಪ್ಪ ದಸರಾ ಹಿನ್ನೆಲೆಯಲ್ಲಿ ಅ.14ರ ಬೆಳಗ್ಗೆ 6ಗಂಟೆಯಿಂದ 16ರ ಬೆಳಗ್ಗೆ 6ಗಂಟೆಯವರೆಗೆ ಮಡಿಕೇರಿ ನಗರ ಠಾಣೆ ಮತ್ತು ಗೋಣಿಕೊಪ್ಪ ಠಾಣೆ ಸರಹದ್ದಿನ 10 ಕಿ.ಮೀ.ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೊಟೇಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದಡೆ ಅ.17ರಂದು ತಲಕಾವೇರಿಯಲ್ಲಿ ನಡೆಯಲಿರುವ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಅ.16ರ ಬೆಳಗ್ಗೆ 6ಗಂಟೆಯಿಂದ 18ರ ಬೆಳಗ್ಗೆ 6ಗಂಟೆಯವರೆಗೆ ಭಾಗಮಂಡ ಠಾಣಾ ಸರಹದ್ದಿನ 20 ಕಿ.ಮೀ. ವ್ಯಾಪ್ತಿಯೊಳಗೆ ಬರುವ (ಚೇರಂಬಾಣೆ ಸೇರಿದಂತೆ) ಎಲ್ಲಾ ಗ್ರಾಮಗಳಲ್ಲಿರುವ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಕ್ಲಬ್, ಹೊಟೇಲ್ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದಾಗಿ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.