ಸೋಮವಾರಪೇಟೆ : ಕೇಂದ್ರ ಸರ್ಕಾರವು ಬೆಳೆಗಾರರಿಗೆ ಮಾರಕವಾಗಿರುವ ಸರ್ಫೈಸಿ ಕಾಯಿದೆಯನ್ನು ರದ್ದು ಪಡಿಸಬೇಕೆಂದು ತಾಲ್ಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಬಾಚಿನಾಡಂಡ ಮೋಹನ್ ಬೋಪಣ್ಣ ಮಾತನಾಡಿ, ವಾಣಿಜ್ಯ ಬ್ಯಾಂಕ್ಗಳು ವಾಯಿದೆ ಮೀರಿದ ಕೃಷಿ ಸಾಲದ ವಸೂಲಾತಿಗೆ ಸರ್ಫೈಸಿ ಕಾಯಿದೆಯನ್ನು ಬಳಸಿಕೊಂಡು ಕೃಷಿಕರಿಗೆ 60 ದಿನಗಳ ತಿಳುವಳಿಕೆ ಪತ್ರ ನೀಡಿ, ತದ ನಂತರ ಯಾವುದೇ ಮುನ್ಸೂಚನೆ ನೀಡದೆ, ಹರಾಜು ಮಾಡುತ್ತಾರೆ. ಇದರ ಮೂಲಕ ಬರುವ ಹಣವನ್ನು ಸಾಲಕ್ಕೆ ವಜಾಗೊಳಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕಾಯಿದೆ ಜಾರಿಗೊಳಿಸಿದಲ್ಲಿ ಭೂ ಮಾಫಿಯಾದವರು, ಬ್ಯಾಂಕ್ ಹಾಗೂ ದಲ್ಲಾಳಿಗಳ ಒಳ ಒಪ್ಪಂದದ ಮುಖಾಂತರ ಕೃಷಿ ಜಮೀನುಗಳನ್ನು ಕಡಿಮೆ ಬೆಲೆಗೆ ಹರಾಜಿನಲ್ಲಿ ಖರೀದಿಸಿ, ಪ್ರತೀ ಕೃಷಿಗೆ ಒಳಪಟ್ಟ ಹಳ್ಳಿಗಳನ್ನು ಆಕ್ರಮಿಸಿಕೊಂಡು ಅವರಿಗೆ ಬೇಕಾದಂತೆ ಜಮೀನುಗಳನ್ನು ಪರಿವರ್ತಿಸಿಕೊಳ್ಳುವ ಅವಕಾಶ ಇದೆ. ಈ ಕಾಯಿದೆ ಜಾರಿಯಾದರೆ, ಭವಿಷ್ಯದಲ್ಲಿ ಎಲ್ಲ ಕೃಷಿ ಉತ್ಪನ್ನಗಳು ಕುಂಠಿತವಾಗಿ ದೇಶವು ಆಹಾರದ ಕೊರತೆಯನ್ನು ಎದುರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಕೋವಿಡ್ 19ರ ಮಹಾಮಾರಿ ಹಾಗೂ ಹವಾಮಾನ್ಯ ವೈಪರೀತ್ಯದಿಂದಾಗಿ ಬೆಳೆಗಾರರು ಕೃಷಿ ಚಟುವಟಿಕೆಗಳನ್ನು ಮಾಡಲಾಗದೆ, ನಷ್ಟ ಅನುಭವಿಸಿಕೊಂಡು ಬಂದಿರುತ್ತಾರೆ. ಪ್ರಸ್ತುತ ವಾಣಿಜ್ಯ ಬ್ಯಾಂಕ್ಗಳು ಬೆಳೆಗಾರರಿಂದ ವಾಯಿದೆ ಮೀರಿದ ಸಾಲದ ವಸೂಲಾತಿಗೆ ಸರ್ಫೈಸಿ ಕಾಯಿದೆಯನ್ನು ಬಳಸಿಕೊಳ್ಳುತ್ತಿದ್ದು, ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ವಾಣಿಜ್ಯ ಬ್ಯಾಂಕ್ಗಳು ಸಾಲ ವಸೂಲಾತಿ ಮಾಡುವುದನ್ನು ಮುಂದೂಡಬೇಕಾಗಿ ಮನವಿ ಮಾಡಿದ್ದಾರೆ.
ಪ್ರಸಕ್ತ ಸಾಲಿನ ಜುಲೈ ತಿಂಗಳ ಅಂತ್ಯಕ್ಕೆ ಹಿಂದಿನ ಸಾಲಿಗಿಂತ ದುಪ್ಪಟ್ಟು ಮಳೆಯಾಗಿದ್ದು, ತೋಟದಲ್ಲಿ ತೇವಾಂಶ ಹೆಚ್ಚಿದ ಹಿನ್ನೆಲೆಯಲ್ಲಿ ಕಾಫಿ ಮತ್ತು ಕರಿಮೆಣಸು ಫಸಲು ಉದುರಲು ಪ್ರಾರಂಭಿಸಿದೆ. ಇದರೊಂದಿಗೆ ಕಾಡು ಪ್ರಾಣಿಗಳಿಂದ ಬೆಳೆ ನಷ್ಟ ಉಂಟಾಗುತ್ತಿದೆ. ರಾಜ್ಯ ಸರಕಾರ ಬೆಳೆಗಾರರ ಸಂಕಷ್ಟವನ್ನು ಮನಗಂಡು ಕನಿಷ್ಠ ಒಂದು ಹೆಕ್ಟೇರಿಗೆ ರೂ. ಒಂದು ಲಕ್ಷ ಪರಿಹಾರ ಘೋಷಣೆ ಮಾಡಿ, ಬೆಳೆಗಾರರ ಹಿತ ಕಾಪಾಡಬೇಕೆಂದು ಸಂಘದ ಉಪಾಧ್ಯಕ್ಷ ಬಿ.ಎಂ. ಲವ ಮನವಿ ಮಾಡಿದರು.