News Karnataka Kannada
Thursday, May 02 2024
ಮಡಿಕೇರಿ

‘ಐಎನ್‍ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆ ಲೋಕಾರ್ಪಣೆ

Latest News
Photo Credit :

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ‘ಐಎನ್‍ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆಯನ್ನು ಭಾರತೀಯ ನೌಕಪಡೆಯ ಪೂರ್ವ ವಿಭಾಗದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿದ ಬಳಿಕ, ಐಎನ್‍ಎಸ್ ಶಿವಾಲಿಕ್ ಮಾದರಿಯು ಯುದ್ದ ನೌಕೆಯನ್ನು ಅವರು ಉದ್ಘಾಟಿಸಿದರು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಅವರು, ಯುವ ಜನರು ನೌಕಾಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವಂತಾಗಬೇಕು ಎಂದು ಕರೆ ನೀಡಿದರು. ಭಾರತೀಯ ನೌಕಾದಳವು ಅತ್ಯುತ್ತಮ ಮಾದರಿ ನೌಕಾ ಸೇನೆ ಹೊಂದಿದೆ. ಭಾರತೀಯ ನೌಕಾಪಡೆಗೆ ತನ್ನದೇ ಆದ ಸ್ಥಾನವಿದೆ ಎಂದರು.

ಕೊಡಗಿನ ಜನರು ಸೇನಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸೇನಾ ಕ್ಷೇತ್ರವೆಂದರೆ ಹೆಚ್ಚಿನ ಗೌರವ ಭಾವನೆ ಹೊಂದಿದ್ದಾರೆ ಎಂದು ವೈಸ್ ಅಡ್ಮಿರಲ್ ದಾಸ್ ಗುಪ್ತ ಅವರು ಶ್ಲಾಘಿಸಿದರು.

ಭಾರತೀಯ ನೌಕಾಪಡೆಯಿಂದ ಭವಿಷ್ಯದಲ್ಲಿ 41 ಯುದ್ದ ಹಡಗು ನಿರ್ಮಾಣವಾಗಲಿದ್ದು, ಇದರಲ್ಲಿ 31 ಯುದ್ಧ ಹಡಗುಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ. ಮುಂಬಯಿ, ಕೊಲ್ಕತ್ತ, ಗೋವಾ, ವಿಶಾಖಪಟ್ಟಣದಲ್ಲಿ ಇವು ನಿರ್ಮಾಣವಾಗಲಿವೆ. ಹಾಗೆಯೇ ಕೊಚ್ಚಿನ್‍ನಲ್ಲಿ ಖಾಸಗಿಯಾಗಿ ಯುದ್ಧ ಹಡಗು ನಿರ್ಮಾಣವಾಗಲಿದೆ. ರಾಷ್ಟ್ರದ ಭದ್ರತೆಗೆ ನೌಕಾಪಡೆ ಹೆಚ್ಚಿನ ಒತ್ತು ನೀಡಿದೆ ಎಂದು ಭಿಸ್ವಜಿತ್ ದಾಸ್ ಗುಪ್ತ ಅವರು ತಿಳಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್(ನಿವೃತ್ತ) ಕೆ.ಸಿ.ಸುಬ್ಬಯ್ಯ ಅವರು ಮಾತನಾಡಿ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಅಭಿವೃದ್ಧಿಗೆ ಭಾರತೀಯ ಸೇನಾ ವಿಭಾಗದ ವಾಯುಪಡೆ, ನೌಕಾಪಡೆ, ಭೂಸೇನಾಪಡೆ ಹೀಗೆ ಎಲ್ಲರೂ ಕೈಜೋಡಿಸಿದ್ದಾರೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಿಯರ್ ಅಡ್ಮಿರಲ್ ಉತ್ತಯ್ಯ ಅವರು ನೌಕಾಪಡೆಯ ಸಬ್‍ಮೆರಿಯನ್ ಉದ್ಘಾಟಿಸಿದರು. ಲೆ.ಜನರಲ್ ಪಿ.ಸಿ.ತಿಮ್ಮಯ್ಯ(ನಿವೃತ್ತ) ಅವರು ರಿಯರ್ ಅಡ್ಮಿರಲ್ ಉತ್ತಯ್ಯ ಅವರಿಗೆ ಒಡಿಕತ್ತಿ ನೀಡಿ ಗೌರವಿಸಿದರು.

ಲೆ.ಜನರಲ್(ನಿವೃತ್ತ) ಕೆ.ಪಿ.ನಂಜಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಇತರರು ಇದ್ದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸ್ವಾಗತಿಸಿದರೆ. ಸಿ.ಟಿ.ಪಂಚಮ್ ನಾಡಗೀತೆ ಹಾಡಿದರು. ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನಾ ಅವರು ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ತಿಮ್ಮಯ್ಯ ಅವರ ಜೀವನ, ಸೇನಾ ಕ್ಷೇತ್ರದಲ್ಲಿನ ಸಾಧನೆಯನ್ನು ವೈಸ್ ಅಡ್ಮಿರಲ್ ಅವರು ವೀಕ್ಷಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು