ಮಡಿಕೇರಿ: ಯಾವುದೇ ಕ್ಷೇತ್ರದಲ್ಲಾಗಲಿ ಸಾಧನೆ ಮಾಡಬೇಕೆಂದರೆ ಕಠಿಣ ಅಭ್ಯಾಸ ಹಾಗೂ ಪರಿಶ್ರಮ ಮುಖ್ಯ ಎಂದು ಝೀ ಕನ್ನಡ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ’ ದ ಚಾಂಪಿಯನ್ ಗಳಾದ ರಾಹುಲ್ ರಾವ್ ಹಾಗೂ ಬೃಂದಾ ಜೋಡಿ ಅಭಿಪ್ರಾಯಪಟ್ಟರು.
ಬಹುಮಾನ ಗೆದ್ದ ಬಳಿಕ ತವರಿಗೆ ಆಗಮಿಸಿದ ರಾಹುಲ್ ಹಾಗೂ ಬೃಂದಾ ಅವರನ್ನು ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ ಅವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ, ಸಂಸ್ಥೆಯ ನೃತ್ಯಪಟುಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್, ಸತತ ಅಭ್ಯಾಸ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿಸುತ್ತದೆ. ಯಾವುದೇ ಸಾಧನೆ ಮಾಡಬೇಕಿದ್ದರೂ ಕಠಿಣ ಪರಿಶ್ರಮ ಅವಶ್ಯವೆಂದರಲ್ಲದೆ,ಡಿಕೆಡಿಯ ಸುದೀರ್ಘ ಪಯಣದ ಬಗ್ಗೆ ಮಕ್ಕಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ಬೃಂದಾ ಪ್ರಭಾಕರ್ ಮಾತನಾಡಿ, ಡಿಕೆಡಿಯಲ್ಲಿ ಗೆಲುವು ಸಾಧಿಸಿದ್ದಕ್ಕಿಂತ ಕಲಿತದ್ದೇ ಹೆಚ್ಚು, ಸಾಕಷ್ಟು ಕಲಿತಿದ್ದೇವೆ, ಎಲ್ಲಕ್ಕಿಂತ ಸಂತೋಷ ತಂದಿರುವದು ಕೊಡಗಿಗೆ ಭೇಟಿ ನೀಡಿದಾಕ್ಷಣ ಇಲ್ಲಿನ ಜನರು ತೋರಿದ ಪ್ರೀತಿ, ಅಭಿಮಾನ, ಆತಿಥ್ಯ ಎಂದು ಹೆಮ್ಮೆ ವ್ಯಕ್ತ ಪಡಿಸಿದರು.
ಅತಿಥಿಯಾಗಿದ್ದ ನಗರ ಸಭಾ ಸದಸ್ಯೆ ಸವಿತಾ ರಾಖೇಶ್ ಮಾತನಾಡಿ, ಕೊಡಗಿನ ನೃತ್ಯಪಟು ಪ್ರಥಮ ಬಾರಿಗೆ ಗೆಲುವು ಸಾಧಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಈ ಸಂಸ್ಥೆಯ ಮಕ್ಕಳು ಕೂಡಾ ಸಾಧನೆ ಮಾಡುವಂತಾಗಬೇಕೆಂದು ಹಾರೈಸಿದರು. ಮತ್ತೋರ್ವ ಅತಿಥಿ ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿ, ಸಾಧನೆ ಮಾಡಲು ಧೈರ್ಯ, ಛಲ ಇರಬೇಕು, ಸಾಧನೆ ಮಾಡಿದವರನ್ನು ಪ್ರೇರಕರನ್ನಾಗಿರಿಸಿಕೊಂಡು ಗುರಿ ಸಾಧಿಸಬೇಕೆಂದು ಹೇಳಿದರು.
ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಣ್ಣ ವಯಸಿನಿಂದಲೇ ಅಭ್ಯಸಿಸುತ್ತಾ ಮುನ್ನಡೆದರೆ ಯಶಸ್ಸು ಸಿಗಲಿದೆ ಎಂದು ಅಭಿಪ್ರಾಯಿಸಿದರು.
ಸಂಸ್ಥೆಯ ಪೋಷಕಿ ಸವಿತಾ ಅರುಣ್ ಶುಭ ಹಾರೈಸಿದರು. ರಾಹುಲ್ ಅವರ ನೃತ್ಯಗುರು ವಿನೋದ್ ಕರ್ಕೇರ ಮಡಿಕೇರಿ ಯಲ್ಲೊಂದು ಉತ್ತಮ ವೇದಿಕೆ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ನಗರಸಭೆಯಿಂದ ಶಿಷ್ಯವೇತನ ಒದಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಸಂಸ್ಥೆಯ ನೃತ್ಯ ಸಂಯೋಜಕ ಮಹೇಶ್, ತರಬೇತುದಾರ ಕಿರಣ್, ಪೋಷಕರಾದ ಕುಡೆಕಲ್ ಸವಿತಾ, ಅನಿತಾ ವೆಂಕಟೇಶ್ ನೃತ್ಯಪಟುಗಳು ಮತ್ತಿತರರು ಹಾಜರಿದ್ದರು.