ಮಡಿಕೇರಿ ಡಿ.9 : ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಒಂದು ಸ್ಥಾನಕ್ಕೆ ಕೊಡಗಿನಲ್ಲಿ ಭಾನುವಾರ ನಡೆಯುತ್ತಿರುವ ಚುನಾವಣಾ ಕಣದಲ್ಲಿ ಇಬ್ಬರು ಪ್ರಬಲ ಅಭ್ಯರ್ಥಿಗಳು ಮಾತ್ರ ಉಳಿದುಕೊಂಡಂತಾಗಿದೆ. ನಿರ್ದೇಶಕರ ಸ್ಥಾನಕ್ಕೆ ಒಟ್ಟು ನಾಲ್ಕು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು.
ಗುರುವಾರ ಚೌಡ್ಲು ಗ್ರಾಮದ ಮತ್ತೋರ್ವ ಅಭ್ಯರ್ಥಿ ಸಿ ಕೆ ರಾಜೀವ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಕುರಿತು ಪತ್ರಿಕಾ ಕೆ ನೀಡಿರುವ ರಾಜೀವ್ ಅವರು ಹರಪಳ್ಳಿ ರವೀಂದ್ರ ಅವರನ್ನು ಬೆಂಬಲಿಸುವಂತೆ ಜನಾಂಗದ ಹಿರಿಯರು ಮನೆಗೆ ಬಂದು ಕೋರಿಕೊಂಡ ಮೇರೆಗೆ ತಾವು ನಿವೃತ್ತಿ ಘೋಷಿಸಿದ್ದು, ತಾವು ಹಾಗೂ ತಮ್ಮ ಕುಟುಂಬಸ್ಥರು ಮತ್ತು ಬೆಂಬಲಿಗರು ಉತ್ತಮ ಸಮಾಜಮುಖಿ ಕೆಲಸವನ್ನು ಮಾಡುತ್ತಿರುವ ರವೀಂದ್ರ ಅವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಕೊಡ್ಲಿಪೇಟೆಯ ಅಭ್ಯರ್ಥಿ ಕೆ ಎನ್ ಮಂಜುನಾಥ್ ಬುಧವಾರ ಕಣದಿಂದ ಹಿಂದೆ ಸರಿದಿದ್ದು ತಾವು ಹಾಗೂ ಬೆಂಬಲಿಗರು ಹರಪಳ್ಳಿ ರವೀಂದ್ರ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದರು.
ಇದರಿಂದಾಗಿ ಕಣದಲ್ಲಿ ಹೆಚ್ ಎಸ್ ಚೇತನ್ ಮತ್ತು ಹೆಚ್ ಎನ್ ರವೀಂದ್ರ ಇಬ್ಬರೇ ಉಳಿದುಕೊಂಡಂತಾಗಿದ್ದು ಕಳೆದ 10 ದಿನಗಳಿಂದಲೂ ಮತದಾರರು ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರವನ್ನು ನಡೆಸುತಿದ್ದಾರೆ. ತೀವ್ರ ಪೈಪೋಟಿ ಇರುವ ಈ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಜಯ ಸಾಧಿಸಲು ಮತದಾರರ ಸಭೆಗಳನ್ನು ಏರ್ಪಡಿಸಿ ಭೋಜನ ಪಾರ್ಟಿಗಳನ್ನು ಆಯೋಜಿಸಿ ಮತ ಕೇಳುತಿದ್ದಾರೆ. ಡಿಸೆಂಬರ್ 12 ರಂದು ಚುನಾವಣೆ ನಡೆಯಲಿದ್ದು ಜಿಲ್ಲೆಯ ಒಟ್ಟು 31 ಮತಗಟ್ಟೆಗಳಲ್ಲಿ 15,510 ಮತದಾರರು ಮತದಾನ ಮಾಡಲು ಸಿದ್ದತೆ ನಡೆಸಲಾಗಿದೆ. ಡಿಸೆಂಬರ್ 15 ರಂದು ಮತಗಳ ಎಣಿಕೆ ನಡೆಯಲಿದೆ.