ಮೈಸೂರು : ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ತಲೆ ಮೇಲೆ ಸೂರಿಲ್ಲ, ಇಡೀ ಗ್ರಾಮದ ಚರಂಡಿ ನೀರು ಮನೆ ಮುಂದೆ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೌಲಭ್ಯವಿಲ್ಲ ಇದು ಕಳೆದ ಏಳು ದಶಕಗಳಿಂದ ಹಾಗೂ ಮೂರು ತಲೆಮಾರುಗಳಿಂದ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಪುಟ್ಟಮ್ಮ ಮತ್ತು ಎಲ್ಲಮ್ಮ ಎಂಬ ಎರಡು ಕುಟುಂಬಗಳ ದುಃಸ್ಥಿತಿ.
ನಂಜನಗೂಡು ತಾಲ್ಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ ವಾಸವಿರುವ ಹಂದಿಜೋಗಿ ಕುಟುಂಬದ ಪರಿಸ್ಥಿತಿ ನೋಡಿದ್ರೆ ಜನಪ್ರತಿನಿಧಿಗಳಾಗಲಿ,ಅಧಿಕಾರಿಗಳಾಗಲಿ ತಲೆ ತಗ್ಗಿಸುವಂತಾಗುತ್ತದೆ. ಸುಮಾರು 75 ವರ್ಷಗಳಿಂದ ಜೋಪಡಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬದುಕು ಸಾಗಿಸುತ್ತಿರುವ ಈ ಕುಟುಂಬಗಳು ಚುನಾವಣೆ ಬಂದ್ರೆ ಮತಹಾಕಿ ಹಕ್ಕು ಚಲಾಯಿಸುತ್ತಾರೆ. ಆದ್ರೆ ಮೂಲಭೂತ ಸೌಕರ್ಯಗಳನ್ನ ಪಡೆಯುವ ತಮ್ಮ ಹಕ್ಕಿನಲ್ಲಿ ನಿರಂತರವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಚುನಾವಣೆ ಬಂದ್ರೆ ಮತಕ್ಕಾಗಿ ಜೋಪಡಿ ಬಾಗಿಲು ಬಡಿಯುವ ಜನಪ್ರತಿನಿಧಿಗಳಿಗೆ ಇವರ ಬವಣೆ ಮಾತ್ರ ಕಾಣಿಸುತ್ತಿಲ್ಲ.
ನಮಗೆ ಮನೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಎಂದು ಸಾಕಷ್ಟು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಕುಟುಂಬಸ್ಥರು ನಿರ್ಧರಿಸಿದ್ದಾರೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿಲ್ಲ. ಗ್ರಾಮದ ಚರಂಡಿ ನೀರೆಲ್ಲಾ ಇವರ ಜೋಪಡಿಗಳ ಮುಂದೆ ಸಂಗ್ರಹವಾಗಿ ದುರ್ವಾಸನೆ ಕಾಡುತ್ತಿದ್ದರೂ ಸಹಸಿಕೊಳ್ಳುತ್ತಿರುವ ಈ ಕುಟುಂಬದ ಸಹನೆಯನ್ನ ಅರ್ಥಮಾಡಿಕೊಳ್ಳುವ ಮನುಸ್ಸುಗಳೇ ಇಲ್ಲ. ಈ ದೃಶ್ಯಗಳನ್ನ ನೋಡಿಯಾದ್ರೂ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಕಿಂಚತ್ತಾದರೂ ಹೃದಯವಂತೆಕೆ ತೋರಿ ಇವರ ಬವಣೆ ನೀಗಿಸಬೇಕಿದೆ