ನಂಜನಗೂಡು : ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಛಲವಾದಿ ಮಹಾಸಭಾ ಮತ್ತು ಕೆ.ಶಿವರಾಂ ಅಭಿಮಾನಿ ಬಳಗ ನಂಜನಗೂಡು ವತಿಯಿಂದ ನುಡಿ ನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ದಿವಂಗತ ಕೆ.ಶಿವರಾಂ ಅವರ ಧರ್ಮಪತ್ನಿ ಶ್ರೀಮತಿ ವಾಣಿ ಶಿವರಾಂ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿವಂಗತ ಕೆ. ಶಿವರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು , ಅವರನ್ನು ನಾನು ಈ ರೀತಿ ನೋಡ್ತಿನಿ ಅಂತ ಅಂದುಕೊಂಡಿರಲಿಲ್ಲ.
ಬಡತನದಿಂದ ಬಂದು ಶಿಕ್ಷಣ ಪಡೆದು ಐಎಎಸ್ ಅಧಿಕಾರಿ ಆಗಿದ್ದರು. ತಂದೆಯ ಮಾರ್ಗದರ್ಶನದಲ್ಲಿ ಓದಿ ಉನ್ನತ ಅಧಿಕಾರಿಯಾಗಿ ಜನಪ್ರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಧಿಕಾರದ ಅವಧಿಯಲ್ಲಿ ಹೊಸ ಹೊಸ ಯೋಜನೆಗಳನ್ನು ತಂದು ಕೊಟ್ಟಿದ್ದರು. ಎಲ್ಲ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ.ಅವರ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಇದರಿಂದ ತೃಪ್ತಿ ಹೊಂದಿದ್ದರು.
ಸ್ವಾಭಿಮಾನದಿಂದ ಹಠ ಛಲದಿಂದ ಬದುಕಿ ತೋರಿಸಿದ್ದಾರೆ. ನನಗೆ ಗುರು ಆಗಿದ್ದರು. ನಂಜುಂಡೇಶ್ವರ ನನಗೆ ಇಂತಹ ಸ್ಥಿತಿ ಕೊಡಬಾರದಿತ್ತು ಎಂದು ಭಾವುಕರಾದರು.ನಂಜನಗೂಡಿಗೆ ಅವರ ನಂಟು ಇದೆ. ಅವರಂತೆ ಮನೆ ಮನೆಗೆ ಒಳ್ಳೆ ಆಫೀಸರ್ ಆಗಬೇಕು ಎಂಬುದು ಅವರ ಕನಸು.
ನನ್ನ ಜನಗಳಿಗೆ ಕೆಲಸ ಮಾಡ್ಬೇಕು ಎಂದು ಹಂಬಲಿಸುತ್ತಿದ್ದರು. ಅಧಿಕಾರ ಮುಗಿದ ಮೇಲೆ ರಾಜಕೀಯ ಕ್ಷೇತ್ರಕ್ಕೆ ಬಂದರು . ಆದರೆ, ಅದು ನಿರಾಸೆ ಆಯ್ತು. ನಂಜುಂಡೇಶ್ವರ ಅವರನ್ನು ಕಿತ್ತು ಕೊಳ್ಳಬಾರದಿತ್ತು. ನಾನು ಎಂಥ ನತದೃಷ್ಟೆ ಎಂದು ನುಡಿ ನಮನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟರು.
ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಖಚಿತ ಎಂದ ಶ್ರೀಮತಿ ವಾಣಿ ಕೆ. ಶಿವರಾಂ
ಅಭಿಮಾನಿಗಳ ಆಸೆಯಂತೆ ನಾನು ತೀರ್ಮಾನಿಸಿದ್ದೇನೆ ನಾನು ಜನ ಸೇವೆ ಮಾಡ್ಬೇಕು. ಅವರ ಆಸೆಯನ್ನು ನನಸು ಮಾಡ್ಬೇಕು ಅದಕ್ಕೆ ನಾನು ಜನ ಸೇವೆ ಮಾಡಲು ಬಂದಿದ್ದೇನೆ. ನನ್ನ ಯಜಮಾನರಿಗೆ ನ್ಯಾಯ ಒದಗಿಸಬೇಕು. ನೀವು ನನ್ನ ಜೊತೆ ಕೊನೆಯವರೆಗೂ ಇದ್ದು ಶಕ್ತಿ ತುಂಬುವ ಕೆಲಸವನ್ನು ಮಾಡಿ, ನೀವೆಲ್ಲರೂ ನನ್ನ ಜೊತೆಗೆ ನಿಲ್ಲಿ , ನಿಮ್ಮ ಆರ್ಶೀವಾದ ನನಗೆ ಬೇಕು ಎಂದು ಸಭೆಯಲ್ಲಿ ಶ್ರೀಮತಿ ವಾಣಿ ಕೆ. ಶಿವರಾಂ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಗ್ರಿನ್ ಸಿಗ್ನಲ್ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿನಾಗಭೂಷನ್, ಛಲವಾದಿ ಮಹಾಸಭಾದ ರಾಜ್ಯ ಖಜಾಂಚಿ, ಮೈಕೋ ನಾಗರಾಜ್, ರಾಮನಗರ ಮಾಜಿ ಜಿಲ್ಲಾಧ್ಯಕ್ಷ ಜೈಕಾಂತ್ ಚಾಲುಕ್ಯ, ರಾಜ್ಯ ಉಪಾಧ್ಯಕ್ಷ ಹನಗಳ್ಳಿ ಬಸವರಾಜು, ಕೆ.ಶಿವರಾಂ ಅಳಿಯ ಭರತ್, ಛಲವಾದಿ ಮಹಾ ಪೀಠಾಧಿಪತಿ ಬಸವನಾಗಿದೇವ ಸ್ವಾಮೀಜಿ, ಪ್ರತಿಧ್ವನಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ತ್ರಿನೇಶ್ , ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್, ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಉಮೇಶ್ ರಾಜ್, ಜಿಲ್ಲಾ ಉಪಾಧ್ಯಕ್ಷ ಬದನವಾಳು ಪ್ರಶಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.