ಮೈಸೂರು: ಸರ್ಕಾರದ ಪೈಸೆ ಪೈಸೆಯ ಉಪಯೋಗ ಬಡಜನರ ಜೀವನಕ್ಕೆ ಹೊಸ ಉತ್ಸಾಹ ನೀಡಿದ್ದು, ನಾವು ಹಣ ನೀಡಿದರೆ ಅದರ ಲಾಭ ಸಿಗುವುದಿಲ್ಲ, ಅದಕ್ಕಾಗಿ ಯೋಜನೆಗಳನ್ನು ತಂದಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಬಳಿಕ ಮಾತನಾಡಿದ ಅವರು, 10ಸಾವಿರ ಕೋಟಿ ರೂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಈವರೆಗೆ ರೈತರ ಖಾತೆಗೆ ಜಮೆಯಾಗಿದೆ. 2 ಲಕ್ಷ ಕೋಟಿ ರೂ.ವೆಚ್ಚದಲ್ಲಿ ಕಿಸಾನ್ ಕ್ರೆಡಿಟ್ ಯೋಜನೆ, ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಮುದ್ರಾ ಸಾಲ ಹೀಗೆ ವಿವಿಧ ಯೋಜನೆಗಳಲ್ಲಿ 180 ಸಾವಿರ ಕೋಟಿ ಸಾಲ ನೀಡಲಾಗಿದೆ ಎಂದರು.
ಈ ಭೂಮಿ ನಾಲ್ವಡಿ ಕೃಷ್ಣ ರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು ಅವರಂತಹ ಮಹಾನ್ ನಾಯಕರನ್ನು ನೀಡಿದೆ. ಇನ್ನೂ ಅನೇಕರ ಯೋಗದಾನ ದೇಶಕ್ಕೆ ನೀಡಿದೆ. ಆರ್ಥಿಕ ಮತ್ತು ಆಧ್ಯಾತ್ಮಿಕತೆಯ ದರ್ಶನ ಕರ್ನಾಟಕದಲ್ಲಿ ಕಾಣಬಹುದು ಎಂದರು.
ಕಳೆದ 8 ವರ್ಷದಲ್ಲಿ ಬಡಜನರ ಕಲ್ಯಾಣಕ್ಕಾಗಿ ಹಲವು ಯೋಜನೆ ಜಾರಿಗೆ ತಂದಿದ್ದೇವೆ. ಒಂದು ದೇಶ ಒಂದು ರೇಷನ್ ಕಾರ್ಡ್, ಕಳೆದ 2 ವರ್ಷದಲ್ಲಿ ಕರ್ನಾಟದ ನಾಲ್ಕೂವರೆ ಕೋಟಿ ಜನರಿಗೆ ಪಡಿತರ ಸಿಗುತ್ತಿದೆ. ಕರ್ನಾಟಕದ ವ್ಯಕ್ತಿ ಬೇರೆ ರಾಜ್ಯಕ್ಕೆ ಹೋದರೂ ಈ ಸೌಲಭ್ಯ ದೊರೆಯಲಿದೆ. ಇದೇ ರೀತಿ ಆಯುಷ್ಮಾನ್ ಭಾರತ್ ಯೋಜನೆ ಲಾಭ ಇಡೀ ದೇಶಕ್ಕೆ ಸಿಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ದಿವ್ಯಾಂಗರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಈ ಮೂಲಕ 8 ವರ್ಷಗಳಲ್ಲಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದೇವೆ. ಪಶುಪಾಲನೆ ಮಾಡುವವರಿಗೆ ಬಡ್ಡಿರಹಿತ ಸಾಲ ನೀಡಿದೇವೆ. ಬಡವರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸವಿದೆ. ಜನಪರ ಯೋಜನೆಗಳು ತಲುಪಿದ್ದರಿಂದ ಈ ವಿಶ್ವಾಸ ಬಂದಿದೆ ಎಂದು ತಿಳಿಸಿದರು.
ಮೈಸೂರಿನ ಪ್ರವಾಸೋದ್ಯಮ ಮತ್ತಷ್ಟು ಉನ್ನತೀಕರಣಗೊಳ್ಳಲಿದೆ. 2014ರ ಮೊದಲಿದ್ದ ಕೇಂದ್ರ ಸರ್ಕಾರ ರೈಲ್ವೇ ಬಜೆಟ್ನಲ್ಲಿ ಕರ್ನಾಟಕಕ್ಕೆ 800 ಕೋಟಿ ರೂ ಹಣ ನೀಡಿತ್ತು. ನಮ್ಮ ಸರ್ಕಾರ ಕೇಂದ್ರದ ಬಜೆಟ್ನಲ್ಲಿ 7ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಆರು ಪಟ್ಟು ರೈಲ್ವೇ ಯೋಜನೆಗೆ ಹಣ ನೀಡಲಾಗಿದೆ. ರೈಲು ಆಧುನೀಕರಣ ವಿದ್ಯುದೀಕರಣಕ್ಕಾಗಿ ಕೋಟ್ಯಾಂತರ ರೂ.ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಹಳೇ ಮೈಸೂರು ಭಾಗದ ಆಯ್ದ 20 ಕೇಂದ್ರ ಸರ್ಕಾರದ 43ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಕೇಂದ್ರದ ಯೋಜನೆಗಳಿಂದ ತಮಗಾಗಿರುವ ಲಾಭ, ಸ್ವ ಉದ್ಯೋಗ ಆರಂಭಿಸಲು ಕಾರಣವಾದ ಸರ್ಕಾರದ ಕ್ರಮಗಳನ್ನು ಫಲಾನುಭವಿಗಳು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಡಾ.ಕೆ.ಸುಧಾಕರ್, ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಸುಮಲತಾ ಅಂಬರೀಶ್, ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಹರ್ಷವರ್ಧನ್, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.