ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಜ ಕಾಲೇಜು ಮೈದಾನದಲ್ಲಿ ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕೆಲವೊಂದು ಕಟ್ಟುನಿಟ್ಟಿನ ಸೂಚನೆಯನ್ನು ಪೊಲೀಸ್ ಇಲಾಖೆ ನೀಡಿದೆ.
ಏನದು ಸೂಚನೆಗಳು ಎನ್ನವುದನ್ನು ನೋಡುವುದಾದರೆ,
ಕಾರ್ಯಕ್ರಮಕ್ಕೆ ಆಗಮಿಸುವವರು, ನಿಗಧಿಪಡಿಸಲಾಗಿರುವ ಆಸನದ ವ್ಯವಸ್ಥೆಯಲ್ಲಿ ಬಂದು ಆಸೀನರಾಗಬೇಕು,ಸಾರ್ವಜನಿಕರು ಆಗಮಿಸುವಾಗ ನಿಗಧಿಪಡಿಸಿದ ಪ್ರವೇಶ ದ್ವಾರಗಳಿಂದಲೇ ಆಗಮಿಸಬೇಕು. ಸಾರ್ವಜನಿಕರು ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗಳ ತಪಾಸಣೆಗೆ ಸಹಕರಿಸಬೇಕು. ಲೋಹ ಶೋಧಕ ಯಂತ್ರದ ಮೂಲಕ ತಪಾಸಣೆಗೆ ಒಳಪಟ್ಟು, ನಂತರ ಕಾರ್ಯಕ್ರಮದ ಸ್ಥಳಕ್ಕೆ ನಿಗಧಿ ಪಡಿಸಿದ ಸ್ಥಳಕ್ಕೆ ತೆರಳುವುದು ಅಗತ್ಯವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ತಮ್ಮೊಂದಿಗೆ ನೀರಿನ ಬಾಟಲ್, ಗಾಜಿನ ಬಾಟಲ್ ಬ್ಯಾಗ್, ವ್ಯಾನಿಟಿಬ್ಯಾಗ್, ಹರಿತವಾದ ವಸ್ತುಗಳು, ಯಾವದೇ ರೀತಿಯ ಆಯುಧಗಳು, ಲೋಹದ ವಸ್ತುಗಳು ಹಾಗೂ ಇತರೆ ಯಾವುದೇ ರೀತಿಯ ವಸ್ತುಗಳನ್ನು ಹೊಂದಿರಬಾರದು.
ಯಾವುದೇ ರೀತಿಯ ಕರಪತ್ರ, ಬ್ಯಾನರ್, ಕಪ್ಪು ಬಟ್ಟೆ/ಫ್ಲಾಗ್, ಪ್ಲೆಕಾರ್ಡ್ಗಳಿಗೆ ಅನುಮತಿ ಇರುವುದಿಲ್ಲ, ಸಾರ್ವಜನಿಕರ ಮೊಬೈಲ್ಗೆ ಮಾತ್ರ ಅವಕಾಶವಿದ್ದು ಉಳಿದ ಯಾವುದೇ ರೀತಿಯ ಎಲೆಕ್ಟಾನಿಕ್ ವಸ್ತುಗಳನ್ನು ಹೊಂದಲು ಅವಕಾಶ ಇರುವುದಿಲ್ಲ, (ಕ್ಯಾಮರಾ, ವೀಡಿಯೋಕ್ಯಾಮರಾ, ಪವರ್ ಬ್ಯಾಂಕ್, ಇಯರ್ಫೋನ್, ಹ್ಯಾಂಡ್ಸ್ ಫ್ರೀ ಇತ್ಯಾದಿ) ಮೊಬೈಲ್ ಪೋನ್ಗಳನ್ನು ಸ್ವಿಚ್ ಆಫ್ ಮಾಡಿರತಕ್ಕದ್ದು. ಬೆಂಕಿ ಉತ್ಪತ್ತಿ ಮಾಡುವ ಬೆಂಕಿಪೊಟ್ಟಣ, ಲೈಟರ್, ಪಟಾಕಿ ಹಾಗೂ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಬರಬಾರದು.
ಬೀಡಿ, ಸಿಗರೇಟ್, ಗುಟ್ಕಾ ಇತ್ಯಾದಿ ತಂಬಾಕು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇದಿಸಿದೆ. ಕರ್ಕಶ ಶಬ್ಧವನ್ನು ಮಾಡುವ ಪೀಪಿ, ತಮಟೆ, ನಗಾರಿ ಇತ್ಯಾದಿ ವಸ್ತುಗಳನ್ನು ನಿಷೇದಿಸಿದೆ. ಸಾರ್ವಜನಿಕರು ತಮಗೆ ಮೀಸಲಿರುವ ಆಸನಗಳಲ್ಲಿಯೇ ಕುಳಿತುಕೊಳ್ಳುವುದು. ಸಾರ್ವಜನಿಕರು ಆಸೀನರಾದ ನಂತರ ಕಾರ್ಯಕ್ರಮ ಮುಗಿಯುವ ವರೆಗೆ ಒಂದು ಸೆಕ್ಟರ್ ನಿಂದ ಇನ್ನೊಂದು ಸೆಕ್ಟರ್ಗೆ ಹೋಗಬಾರದು, ಸಾರ್ವಜನಿಕರು ಆಸೀನರಾದ ಸ್ಥಳದಲ್ಲಿ ನಿಂತುಕೊಳ್ಳುವುದು, ಅನಾವಶ್ಯಕವಾಗಿ ತಿರುಗಾಡುವುದು, ಕಿರುಚುವುದು ಇತ್ಯಾದಿ ಮಾಡದೆ ತಮ್ಮ ಅಕ್ಕ ಪಕ್ಕ ಆಸೀನರಾದ ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು. ಯಾವುದೇ ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟಿಕೆ ಸಾಮಾನುಗಳು ಹಾಗೂ ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವುದು.
ಕಾರ್ಯಕ್ರಮ ವೀಕ್ಷಣೆಗೆ ಬರುವವರು ತಮ್ಮ ವಾಹನಗಳನ್ನು ಸಂಚಾರಿ ಪೊಲೀಸರು ನಿಗಧಿಪಡಿಸಿರುವ ಸ್ಥಳದಲ್ಲೇ ನಿಲ್ಲಿಸುವುದು. ಸಾರ್ವಜನಿಕರು ಗಣ್ಯ ವ್ಯಕ್ತಿಗಳು ಸಾಗುವ ಮಾರ್ಗದಲ್ಲಿ ಗುಂಪು ಸೇರದೆ ಹಾಗು ಮಾರ್ಗಕ್ಕೆ ಬಂದು ಅಡ್ಡಿಯುಂಟು ಮಾಡದಂತೆ ಸಾಕಷ್ಟು ಅಂತರವನ್ನು ಕಾಯ್ದುಕೊಂಡು ದೂರದಿಂದಲೇ ವೀಕ್ಷಿಸಬೇಕಾಗಿದೆ.