ಮೈಸೂರು: ನಗರದ ಬೋಗಾದಿಯ ರವಿಶಂಕರ್ ಬಡಾವಣೆಯಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ವೇದಘೋಷ ಮೊಳಗಿಸಿ ಬಳಿಕ ಬಡಾವಣೆಯ ಉದ್ಯಾನವನದಲ್ಲಿ ವಿವಿಧ ಜಾತಿಯ ಹಣ್ಣು ಹಾಗೂ ಹೂವಿನ ಗಿಡಗಳನ್ನು ನೆಟ್ಟು ಆಚಾರ್ಯರನ್ನು ಸ್ಮರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್ ರವರು ಸರ್ವರಿಗೂ ಕಲ್ಯಾಣ ಮಾಡುವವನೇ ಶಂಕರ, ಭಾರತ ದೇಶದ ಸಂಸ್ಕೃತಿಯಲ್ಲಿ ವೇದ, ಉಪನಿಷತ್ತುಗಳ ಕೊಡುಗೆ ಅನನ್ಯ, ಅದರೊಳಗಿನ ಜ್ಞಾನ ಪಾಶ್ಚಿಮಾತ್ಯ ರಾಷ್ಟ್ರಗಳ ಜನ ಸಹ ಭಾರತದೆಡೆಗೆ ಬಂದು ಅಧ್ಯಯನ ಮಾಡುವಂತೆ ಮಾಡಿವೆ. ಅಂಥಹ ಜ್ಞಾನವನ್ನು ಉಳಿಸಿದ ಕೀರ್ತಿ ಶಂಕರಾಚಾರ್ಯರದ್ದು, ಅವರ ಜನ್ಮ ದಿನದಂದು ವಿಶ್ವ ತತ್ವ ಜ್ಞಾನಿಗಳ ದಿನ ಆಚರಿಸುತ್ತಿರುವುದು ಇಂದಿಗೂ ಅವರು ಪ್ರತಿಪಾದಿಸಿದ ವಿಚಾರಗಳು ಪ್ರಸ್ತುತ ಎಂದು ತಿಳಿಸುತ್ತದೆ ಎಂದರು.
ಎಳೆಯ ವಯಸ್ಸಿನಲ್ಲಿಯೇ ವೇದ ಅಧ್ಯಯನ ಮಾಡಿ ಶಂಕರರು ಪ್ರಸಿದ್ಧರಾಗುತ್ತಾರೆ. ಒಬ್ಬ ಬಡ ವಿಧವೆ ಮನೆಗೆ ಹೋಗಿ ಭಿಕ್ಷೆ ಬೇಡಲು ಅವಳ ಮನೆಯಲ್ಲಿ ಏನೂ ಇರುವುದಿಲ್ಲವಾದ್ದರಿಂದ ಅವಳು ಒಣಗಿದ ಒಂದು ನೆಲ್ಲಿಕಾಯಿಯನ್ನು ಭಿಕ್ಷೆ ಹಾಕುತ್ತಾಳೆ. ಅದರಿಂದ ಸಂತುಷ್ಟರಾಗಿ ಅಲ್ಲಿಯೇ ಕನಕಧಾರಾ ಸ್ತೋತ್ರವನ್ನು ರಚಿಸುತ್ತಾರೆ. ಆ ಮನೆಯನ್ನು ಈಗಲೂ ಕಾಲಟಿಯಲ್ಲಿ ನೋಡಬಹುದಾಗಿದೆ ಎಂದರು.
ದೇಶದ ಮೂಲೆ ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ ತಮ್ಮ ನಾಲ್ಕು ಜನ ಪ್ರಮುಖ ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿ ನಿತ್ಯ ನೈಮಿತ್ತಿಕ ಉಪಾಸನೆ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಸನಾತನ ವೈದಿಕ ಧರ್ಮ ಪುನರುತ್ಥಾನಗೊಳಿಸಿ ಕಾಶ್ಮೀರದ ಸರ್ವಜ್ಞ ಪೀಠಾರೋಹಣ ಮಾಡಿದ ಪ್ರಥಮ ದಾಕ್ಷಿಣಾತ್ಯರು ಶಂಕರರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಮೈಸೂರು ಜಿಲ್ಲಾ ಕಾರ್ಯದರ್ಶಿ ಮೋನಿಕಾ, ಪ್ರಣವ್ಯ ಎಜುಕೇಶನ್ ಟ್ರಸ್ಟ್ ನಿರ್ದೇಶಕರಾದ ಸವಿತಾ ಪುಟ್ಟೇಗೌಡ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ , ನಂಜುಂಡಸ್ವಾಮಿ, ಬಸಪ್ಪ, ವೀರೇಶ್, ಮಾಯ ಶಾನ್ ಬಾಗ್, ರಮ್ಯಾ, ಗೀತಾ, ರವಿಕುಮಾರ್, ಚೆಲುವ ರಾಜು, ಡಾಕ್ಟರ್ ಸುನಿಲ್, ಅರಣ್ಯ ಅಧಿಕಾರಿ ನಂದಕುಮಾರ್, ಭವಾನಿ ಶಂಕರ್, ದೇಶಪಾಂಡೆ, ಭಾಸ್ಕರ್, ರಾಮ್ ಮೂರ್ತಿ, ರಂಗೇಗೌಡ ಮತ್ತು ಇನ್ನಿತರರು ಹಾಜರಿದ್ದರು.