ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಮತ್ತೆ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿದೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹಿರಿಯ ಮುಖಂಡರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಕೆ.ಎಂ.ರಾಜೇಗೌಡ ಅವರ ಹೆಸರು ಅಂತಿಮವಾಗುವ ನಿರೀಕ್ಷೆ ಇಟ್ಟುಕೊಂಡಿದ್ದ ಜೆ.ಡಿ.ಎಸ್. ಕಾರ್ಯಕರ್ತರು ಭ್ರಮನಿರಸನಗೊಂಡಿದ್ದಾರೆ.
ಅತ್ತ ಕೆ.ಎಂ. ರಾಜೇಗೌಡ ಅವರು ಹೆಸರು ಮುನ್ನಲೆಗೆ ಬಂದ ಬಳಿಕ ಇಂದು ಜೆಡಿಎಸ್ ಬಾವುಟವಿಡಿದ ಸ್ವರೂಪ್ ಪ್ರಕಾಶ್ ಮತ್ತವರ ನೂರಾರು ಬೆಂಬಲಿಗರು ನಗರದಲ್ಲಿ ಮೆರವಣಿಗೆ ನಡೆಸಿದ್ದಾರೆ. ನಗರದ ಆದಿಚುಂಚನಗಿರಿ ಮಠದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಗರದಲ್ಲಿ ಕಾಲ್ನಡಿಗೆಯಲ್ಲಿಯೇ ಮೆರವಣಿಗೆ ನಡೆಸಿದ ಸ್ವರೂಪ್ ಪ್ರಕಾಶ್ ಮತ್ತವರ ಬೆಂಬಲಿಗರು ನಗರದ ಎಂ.ಜಿ. ರಸ್ತೆ, ಮೂಲಕ ರವೀಂದ್ರ ನಗರ, ಬಿರನಹಳ್ಳಿ ಕೆರೆ, ಕುವೆಂಪು ನಗರ ರಸ್ತೆ, ಬಿ.ಎಂ. ರಸ್ತೆ, ಸೇರಿ ನಗರದ ವಿವಿದೆಡೆ ಸಂಚರಿಸಿ ಬೆಂಬಲ ಯಾಚಿಸಿದರು.
ಈ ವೇಳೆ ಸ್ವರೂಪ್ ಅವರ ನೂರಾರು ಅಭಿಮಾನಿಗಳು, ಜೆಡಿಎಸ್ ಮುಖಂಡರು ಮೆರವಣಿಗೆಯಲ್ಲಿ ಸಾಥ್ ನೀಡಿದ್ದು ಕಂಡು ಬಂದಿತು. ಸ್ವರೂಪ್ . ಹೆಚ್.ಎಸ್.ಪ್ರಕಾಶ್, ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರುಗಳಿಗೆ ಜೈ ಕಾರ ಹಾಕುತ್ತಾ ಸಾಗಿದ ಮೆರವಣಿಗೆಯಲ್ಲಿ ಜೆಡಿಎಸ್ ಭಾವುಟಗಳು ರಾರಜಿಸಿದವು.
ಈ ಮೂಲಕ ಜೆಡಿಎಸ್ನ ಪ್ರಭಲ ಸ್ಪರ್ಧಿ ತಾವೇ ..! ಎಂಬ ಸಂದೇಶವನ್ನು ಜೆಡಿಎಸ್ ಮುಖಂಡರಿಗೆ ತಲುಪಿಸುವ ಪ್ರಯತ್ನದಲ್ಲಿ ಸ್ವರೂಪ್ ಪ್ರಕಾಶ್ ಯಶಸ್ವಿಯಾದರು.
ಒಟ್ಟಾರೆ ಎರಡು ದಿನಗಳಿಂದ ಜೆಡಿಎಸ್ ಪಾಳಯದಲ್ಲಿ ಮುನ್ನಲೆಗೆ ಬಂದಿದ್ದ ಕೆ.ಎಂ. ರಾಜೇಗೌಡರ ಹೆಸರು ಕುಮಾರಸ್ವಾಮಿ ಅವರ ಒಂದು ಹೇಳಿಕೆಯಿಂದ ಹಿಂದೆ ಸರಿಯುವ ಸಾಧ್ಯತೆ ನಿಚ್ಚಳವಾಗಿದೆ.
ರಾಜೇಗೌಡರ ಹೆಸರು ಅಂತಿಮವಲ್ಲ
ಸ್ವರೂಪ್ ಪ್ರಕಾಶ್ ನಗರದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಶಕ್ತಿಪ್ರದರ್ಶನದ ಮೆರವಣಿಗೆ ನಡೆಸುತ್ತಿರುವ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಳೆನರಸೀಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹಾಸನ ವಿಧಾನಸಭೆ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ರಾಜೇಗೌಡರ ಜೊತೆ ನಾನು ಮಾತನಾಡಿದ್ದು ಚುನಾವಣೆಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿದ್ದೀರ ಎಂದು ಕೇಳಿದ್ದೇನೆ. ಅವರ ಹೆಸರನ್ನು ಕೆಲವರು ಚರ್ಚೆ ಮಾಡಿದ್ದಾರೆ ದೇವೇಗೌಡರ ಮುಂದೆ ಚರ್ಚೆ ಆಗಿರುವುದು ನಿಜ ..!!ಹಾಗೆಂದು ಅವರೇ ಫೈನಲ್ ಅಲ್ಲ ಎಂದರು.
ನಾನೀಗಾಗಲೇ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು ಜಿಲ್ಲೆಯ ಪ್ರವಾಸದಲ್ಲಿ ನನ್ನದೇ ಆದ ರೀತಿಯಲ್ಲಿ ಹಾಸನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಸಂಗ್ರಹಿಸಿದ್ದು ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು .
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಯಾರನ್ನು ಸೋಲಿಸಬೇಕು ಎಂದು ಸ್ಪರ್ಧೆ ಮಾಡುತ್ತಿಲ್ಲ ನನ್ನ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ, ನಮ್ಮ ಅಭ್ಯರ್ಥಿ ಗೆಲ್ಲಲು ಸೂಕ್ತವಾದಂತಹ ನಿರ್ಣಯ ಹಾಸನ ವಿಧಾನಸಭಾ ಕ್ಷೇತ್ರದ ಮತದಾರರ ವಿಶ್ವಾಸ ಗಳಿಸಲು ಕಾರ್ಯಕರ್ತರು ಚುನಾವಣೆ ನಡೆಸಲು ಮಾನಸಿಕವಾಗಿ ಸ್ಥೈರ್ಯ ತುಂಬಬೇಕಿದ್ದು ಸೂಕ್ತವಾದ ಅಭ್ಯರ್ಥಿ ಯಾರನ್ನು ನಿಲ್ಲಿಸಬೇಕು ಎನ್ನುವುದನ್ನು ಹಾಗೂ ನಮ್ಮ ಕಾರ್ಯಕರ್ತರು ಬಲಿಪಶು ಆಗಬಾರದು ಅಂತಹ ನಿರ್ಣಯವನ್ನು ಕೈಗೊಳ್ಳುತ್ತೇನೆ ಎಂದರು.