ಹಾಸನ: ಹಾಸನ ವಿಧಾನ ಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಿಸಲೇ ಬೆಕೆಂಬ ಹಠಕ್ಕೆ ಬಿದ್ದಿರುವ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಅವರು ತಮ್ಮ ಅಮ್ಮನಿಗೆ ಟಿಕೇಟ್ ನೀಡದಿದ್ದರೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಈಗಾಗಲೇ ೯೩ ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಜೆಡಿಎಸ್, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಇನ್ನೂ ಟಿಕೆಟ್ ಘೋಷಿಸಿಲ್ಲ. ಹಾಸನದಿಂದ ತಮ್ಮನ್ನು ಕಣಕ್ಕೆ ಇಳಿಸುವುದಾಗಿ ಮಾತು ಕೊಟ್ಟಿದ್ದ ಎಚ್ಡಿ ಕುಮಾರಸ್ವಾಮಿ ಸೂಚನೆಯಂತೆ ಎಚ್ಪಿ ಸ್ವರೂಪ್ ಪ್ರಚಾರವನ್ನು ಆರಂಭಿಸಿದ್ದಾರೆ. ಆದರೆ ತಮಗೆ ಟಿಕೇಟ್ ನೀಡಬೇಕೆಂದು ಭವಾನಿ ರೇವಣ್ಣ ಪಟ್ಟುಹಿಡಿದಿದ್ದಾರೆ.
ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ಎಚ್ಡಿ ರೇವಣ್ಣ, ಅವರ ಇಬ್ಬರು ಪುತ್ರರು ಬೇಡಿಕೆ ಇಟ್ಟಿದ್ದಾರೆ. ಹಾಸನದಲ್ಲಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವಿನ ಟಿಕೆಟ್ ಫೈಟ್ ಮಗಿಯದಂತಾಗಿದೆ. ಭವಾನಿ ರೇವಣ್ಣ ಅವರಿಗೆ ಯಾವ ಕಾರಣಕ್ಕೂ ಹಾಸನದ ಟಿಕೆಟ್ ನೀಡಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಹೇಳುತ್ತಿದ್ದಾರೆ. ಆದರೆ ರೇವಣ್ಣ ಕುಟುಂಬ ಮಾತ್ರ ಟಿಕೇ ಟ್ ಬೇಡಿಕೆ ಪಟ್ಟನ್ನು ಸಡಿಲಗೊಳಿಸುತ್ತಿಲ್ಲ.
ಈ ಪ್ರಯತ್ನದ ಭಾಗವಾಗಿ ಭವಾನಿ ಅವರಿಗೆ ಟಿಕೆಟ್ ಕೊಡಿಸಲು ರೇವಣ್ಣರ ಇಡೀ ಕುಟುಂಬವೆ ಪಣತೊಟ್ಟಂತಿದೆ. ಈ ಮಧ್ಯೆ ತಾತ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿಯಾಗಿರುವ ಪ್ರಜ್ವಲ್ ಅವರು ತಾಯಿ ಭವಾನಿಗೆ ಟಿಕೆಟ್ ಕೊಡಬೇಕು. ಇಲ್ಲವೇ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸದರಾಗಿರುವ ಪ್ರಜ್ವಲ್ ರೇವಣ್ಣ ದೇವೇಗೌಡರ ಭೇಟಿ ಬೆನ್ನಲ್ಲೇ ಹಾಸನ ಟಿಕೆಟ್ ಗೊಂದಲದ ಬಗ್ಗೆ ಎಚ್.ಡಿ . ಕುಮಾರಸ್ವಾಮಿ ಮತ್ತದೇ ಹಳೆಯ ಸಂದೇಶವವನ್ನು ರವಾನಿಸಿದ್ದಾರೆ. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಭವಾನಿ ರೇವಣ್ಣೆಗೆ ಟಿಕೇಟ್ ಇಲ್ಲ ಎಂದಿದ್ದಾರೆ. ಕಡ್ಡಿ ಮುರಿದಂತೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.
ನನಗಿಲ್ಲಿ ಪಕ್ಷದ ಬೆಳವಣಿಗೆ, ಕಾರ್ಯಕರ್ತರು ಮುಖ್ಯ. ಮೊದಲಿಂದಲು ಹೇಳುತ್ತಿದ್ದೇನೆ. ಅನಿವಾರ್ಯ ಇದ್ದ ಕಡೆ ಕುಟುಂಬದವರು ತಲೆ ಕೊಡುತ್ತೀವಿ. ಟೀಕೆಗಳಿಗೆ ಹೆದರುವುದಿಲ್ಲ. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ನಾವು ಸುಮ್ಮನೆ ಸಾರ್ವಜನಿಕರ ಟೀಕೆಗೆ ಒಳಗಾಗೋದು ಬೇಡ ಎಂದು ಎಚ್ಡಿಕೆ ತಿಳಿಸಿದ್ದಾರೆ.
ಕುಮಾರಸ್ವಾಮಿ ಹಾಗೂ ಪ್ರಜ್ವಲ್ ನಡುವಿನ ಹಗ್ಗಜಗ್ಗಾಟದ ನಡುವೆ ರೇವಣ್ಣ ಹಾಸನ ಟಿಕೆಟ್ ವಿಚಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗೋಷ್ಠಿ ವೇಳೆ ಸ್ವರೂಪ್ ಅವರು ಕುಮಾರಸ್ವಾಮಿ ಅವರನ್ನ ಭೇಟಿಯಾಗಿದ್ದಾರೆಂದು ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಅದ್ಯಾರೋ ನನಗೆ ಗೊತ್ತಿಲ್ಲ, ಹಾಸನದಲ್ಲಿ ಅದ್ಯಾವ ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ನೀಡ್ತಾರೋ ಗೊತ್ತಿಲ್ಲ. ಅನ್ನೋ ಮೂಲಕ ಇನ್ನೂ ಟಿಕೇಟ್ ಗೊಂದಲ ಬಗೆಹರಿದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.