ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಿಂಭಾಗ ಹೆಣ್ಣು ಮಗುವೊಂದನ್ನು ಪೋಷಕರು ಬಿಟ್ಟು ಹೋದ ಘಟನೆ ನೆಡೆದಿದೆ.
ಮಗು ಅಳುತ್ತಿರುವ ಸದ್ದನ್ನು ಕೇಳಿದ ಸ್ಥಳೀಯರು ಕೂಡಲೇ ಮಗುವನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ. ಒಂದು ವಾರದಿಂದ ಸ್ಥಳೀಯರ ಮನೆಯಲ್ಲಿ ಆಶ್ರಯ ಪಡೆದಿದ್ದ ಮಗುವನ್ನು ಇಂದು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಅವರು ವಶಕ್ಕೆ ಪಡೆದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ವಹಿಸಿದ್ದಾರೆ.
ಕಂದಮ್ಮ ಅಳುವಿನ ಶಬ್ಧ ಕೇಳಿದ ಸ್ಥಳೀಯರು ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಮಗುವನ್ನು ರಕ್ಷಿಸಿ ಸ್ಥಳೀಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಅರ್ಜುನ್ ರವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾಯಿಗಳ ದಾಳಿಗೆ ಒಳಗಾಗುತ್ತಿದ್ದ ಕಂದಮ್ಮ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬದುಕಿ ಉಳಿದಿದೆ.
ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಗುವಿನ ತಾಯಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.